ಕಡೂರು: ದೇಶವಾಸಿಗಳು ಇಂದು ಸಮಾನತೆಯನ್ನು ಕಂಡಿದ್ದರೆ ಅದಕ್ಕೆ ಕಾರಣ ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಎಂದು ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.
ತಾಲ್ಲೂಕಿನ ಆಡಗೇರಹಳ್ಳಿ ಗ್ರಾಮದಲ್ಲಿ ರಮಾಬಾಯಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಂಡಾರಿ ಶ್ರೀನಿವಾಸ್
ಸಮಾಜದಲ್ಲಿ ಹಾದುಹೊಕ್ಕಾಗಿದ್ದ ಅಶ್ಪೃಸ್ಯತೆಯನ್ನು ಧಿಕ್ಕರಿಸಿ ಸಮಾನತೆಯನ್ನು ಪ್ರತಿಪಾದಿಸಿದ ಮಹಾನ್ ಚೇತನ ಅಂಬೇಡ್ಕರ್ ಅವರಿಗೆ ಸದಾ ಕಾಲವೂ ಸ್ಪೂರ್ತಿಯಾಗಿದ್ದವರು ರಮಾಬಾಯಿ.ಅಂಬೇಡ್ಕರ್ ಅವರ ಯಶಸ್ಸಿನಲ್ಲಿ ಮರೆಯಾಗಿಯೇ ಉಳಿದು ಹೋದ ರಮಾಬಾಯಿಯವರ ತ್ಯಾಗಜೀವನ ಪ್ರತಿಯೊಬ್ಬರಿಗೂ ತಿಳಿಯಬೇಕು ಎಂದ ಅವರು, ಅಂಬೇಡ್ಕರ್ ಅವರ ಚಿಂತನೆಗಳನ್ನೆ ಆದರ್ಶವಾಗಿಟ್ಟುಕೊಂಡು ರಾಜ್ಯವ್ಯಾಪಿ ಹೋರಾಟ ಮಾಡುತ್ತಿರುವ ಸೇನೆಯ ಕಾರ್ಯ ಶ್ಲಾಘನೀಯ. ಸಮಾಜ ಜಾಗೃತಿಯಾಗಬೇಕಾದರೆ ಶಿಕ್ಷಣಕ್ಕೆ ಹೆಚ್ಚು ಗಮನ ಹರಿಸಬೇಕು ಎಂದರು.
ಕುಂಕಾನಾಡು ಮಂಜುನಾಥ್
ಪ್ರಸ್ತಾವಿಕವಾಗಿ ಮಾತನಾಡಿದ ಡಾ.ಭೀಮರಾವ್ ಕ್ರಾಂತಿ ಕಾರಿ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಕುಂಕಾನಾಡು ಮಂಜುನಾಥ್ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸದಾ ನೆನಪಿಸಿಕೊಳ್ಳುತ್ತೇವೆಯೇ ವಿನಃ ಅವರ ಯಶಸ್ಸಿಗೆ ಪರೋಕ್ಷವಾಗಿ ಪೂರ್ಣ ಸಹಕಾರವಿತ್ತ ರಮಾಬಾಯಿ ಅಂಬೇಡ್ಕರ್ ಅವರನ್ನು ನೆನಪಿಸಿಕೊಳ್ಳಲು ಮುಂದಾಗದಿರುವುದು ವಿಷಾಧನೀಯ.ಆ ತಾಯಿಯ ತ್ಯಾಗ ಜೀವನ ಎಲ್ಲರಿಗೂ ಆದರ್ಶವಾಗಬೇಕು.ಜಾತಿ ಧರ್ಮದ ಬೇಧವಿಲ್ಲದೆ ಬಸವಣ್ಣನವರ ಅನುಭವ ಮಂಟಪದ ಸ್ಪೂರ್ತಿಯಲ್ಲಿ ಆರಂಭವಾದ ಸೇನೆಯ ಗ್ರಾಮ ಶಾಖೆಯನ್ನು ಇಂದು ಆರಂಭಿಸಲಾಗುತ್ತಿದೆ.ಮೌಢ್ಯದಿಂದ ಹೊರಬಂದು ವೈಚಾರಿಕವಾಗಿ ಬದುಕನ್ನು ಕಟ್ಟಿಕೊಳ್ಳುವ ದಿನಗಳು ಬರಬೇಕು ಎಂಬ ಆಶಾಭಾವನೆ ಸಂಘಟನೆಯದ್ದಾಗಿದೆ ಎಂದರು.
ಚೇತನ್ ಕೆಂಪರಾಜು
ಗ್ರಾಮಶಾಖೆಯ ನಾಮಫಲಕ ಉದ್ಘಾಟಿಸಿದ ಜೆಡಿಎಸ್ ಮುಖಂಡ ಚೇತನ್ ಕೆಂಪರಾಜು ಮಾತನಾಡಿ, ಸಮಾಜದಲ್ಲಿ ಬದಲಾವಣೆಯಾಗಬೇಕೆಂದರೆ ಶಿಕ್ಷಣ ಬಹುಮುಖ್ಯ.ಪ್ರತಿಯೊಬ್ಬರೂ ವಿದ್ಯಾವಂತರಾದರೆ ಸ್ವಾಸ್ಥ್ತ ಸಮಾಜ ನಿರ್ಮಾಣವಾಗುತ್ತದೆ. ಸಮಾಜದಲ್ಲಿನ ಅಪಸವ್ಯಗಳು ದೂರವಾಗಬೇಕೆಂದರೆ ಶಿಕ್ಷಣ ಮತ್ತು ಸಂಘಟನೆ ಎರಡೂ ಅನಿವಾರ್ಯ ಅಗತ್ಯ. ಸೇನೆಯ ಕಾರ್ಯಚಟುವಟಿಕೆಗಳಿಗೆ ಸದಾ ಸಹಕಾರ ನೀಡುತ್ತೇನೆ ಎಂದರು.
ಸಂಸ್ಥಾಪಕ ರಾಜ್ಯಾಧ್ಯಕ್ಷ ದೇವಿಕುಮಾರ್ ದೊಡ್ಡಯ್ಯ ಮಾತನಾಡಿ, ಸೇನೆಯ ಮೂಲ ಉದ್ದೇಶವೇ ಶೋಷಿತರ,ದಮನಿತರ ಪರವಾಗಿ ಹೋರಾಡುವ ಮೂಲಕ ಸಮಾಜದಲ್ಲಿ ಸಮಾನತೆ ದೊರಕಿಸುವ ಹಾಗೂ ಸಮಾಜದ ಮುಖ್ಯವಾಹಿನಿಯಲ್ಲಿ ಎಲ್ಲರೂ ಆತ್ಮವಿಶ್ವಾಸದಿಂದ ಬದುಕುವ ವಾತಾವರಣ ನಿರ್ಮಾಣ ಮಾಡುವ ಗುರಿ ಸಂಘಟನೆಯದ್ದಾಗಿದ್ದು, ರಾಜ್ಯವ್ಯಾಪಿ ತನ್ನ ಚಟುವಟಿಕೆಗಳನ್ನು ವಿಸ್ತರಿಸಿದೆ ಎಂದರು.
ಪಂಚನಹಳ್ಳಿ ಪಿಎಸ್ಐ ಷಾಹೀದ್ ಅಫ್ರೀದಿ,
ಮಹಿಳಾ ಹೋರಾಟಗಾರ್ತಿ ಪದ್ಮಾವತಿ , ನಾಗರಾಜಪ್ಪ, ಉಡುಗೆರೆ ರೇವಣ್ಣ, ತಾಲ್ಲೂಕು ಅಧ್ಯಕ್ಷ ರಮೇಶ್, ಕಾರ್ಯದರ್ಶಿ ಗಂಗಾಧರ, ಕುಮಾರಪ್ಪ, ಆಡಿಗೇರಹಳ್ಳಿ ಗ್ರಾಮಸೇನೆ ಶಾಖೆಯ ಪದಾಧಿಕಾರಿಗಳು ಇದ್ದರು.

