
ಕುಂಕಾನಾಡು ಮಂಜುನಾಥ್
ಕಡೂರು: ಡಾ.ಭೀಮರಾವ್ ಅಂಬೇಡ್ಕರ್ ಕ್ರಾಂತಿಕಾರಿ ಸೇನೆಯ ಚಿಕ್ಕಮಗಳೂರು ಜಿಲ್ಕಾ ಹಾಗೂ ತಾಲ್ಲೂಕು ಘಟಕ ಹಾಗೂ ಆಡುಗೇರಹಳ್ಳಿ ಗ್ರಾಮಸೇನೆ ಘಟಕಗಳ ವತಿಯಿಂದ ಮಾತಾ ರಮಾಬಾಯಿ ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮವನ್ನು ತಾಲ್ಲೂಕಿನ ಅಡಿಗೇರಹಳ್ಳಿಯಲ್ಲಿ ಫೆಬ್ರವರಿ 7 ರಂದು ಏರ್ಪಡಿಸಲಾಗಿದೆ ಎಂದು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಕುಂಕಾನಾಡು ಮಂಜುನಾಥ್ ತಿಳಿಸಿದರು.
ಈ ಕುರಿತು ಮಾಹಿತಿ ನೀಡಿದ ಅವರು, ಅಂಬೇಡ್ಕರ್ ಅವರು ಭಾರತ ದೇಶಕ್ಕೆ ನೀಡಿದ ಕೊಡುಗೆ ಏನೆಂದು ದೇಶವಾಸಿಗಳೆಲ್ಲರೂ ಬಲ್ಲರು. ಬಾಬಾ ಸಾಹೇಬರ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದವರು ರಮಾಬಾಯಿ ಅಂಬೇಡ್ಕರ್ ಅವರೂ ಸಹ ನಮ್ಮೆಲ್ಲರ ಪ್ರಾತಃ ಸ್ಮರಣೀಯರಾಗಿದ್ದಾರೆ. ಅವರ ಸಂಸ್ಮರಣೆ ನಮ್ಮೆಲ್ಲರ ಕರ್ತವ್ಯ. ಈ ಕಾರಣದಿಂದಲೇ ರಮಾಬಾಯಿ ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಆಯುಷ್ಮಾನ್ ದೇವಿಕುಮಾರ್ ದೊಡ್ಡಯ್ಯ ವಹಿಸಲಿದ್ದು, ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಲಿದ್ದಾರೆ. ರಮಾಬಾಯಿಯವರ ಕುರಿತು ಮಾಜಿ ಶಾಸಕ ವೈ.ಎಸ್.ವಿ.ದತ್ತ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಅಂಬೇಡ್ಕರ್ ಅವರ ಸ್ಪೂರ್ತಿ ಯಾದ ರಮಾಬಾಯಿಯವರ ಭಾವಚಿತ್ರಕ್ಕೆ ಮಾಜಿ ಶಾಸಕ ಬೆಳ್ಳಿಪ್ರಕಾಶ್ ಪುಷ್ಪನಮನ ಸಲ್ಲಿಸಲಿದ್ದಾರೆ. ಯುವ ಮುಖಂಡ ಚೇತನ್ ಕೆಂಪರಾಜು ನಾಮಫಲಕ ಉದ್ಘಾಟಿಸುವರು. ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಮುಖಂಡ ಷಣ್ಮುಕಾ ಭೋವಿ, ಸೇನೆಯ ಯುವ ಘಟಕದ ಅಧ್ಯಕ್ಷ ಆಯುಷ್ಮಾನ್ ಜಗದೀಶ್, ಸೇನೆಯ ರಾಜ್ಯ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸೇನೆಯ ತಾಲ್ಲೂಕು ಮತ್ತು ಅಡಿಗೇರಹಳ್ಳಿ ಗ್ರಾಮ ಘಟಕದ ಪದಾಧಿಕಾರಿಗಳು ಇದ್ದರು.
