ಕಡೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಮಲ್ಲೇಶ್ವರದ ಸ್ವರ್ಣಾಂಬ ಕಲ್ಯಾಣ ಮಂಟಪದಲ್ಲಿ ಭಾನುವಾರ ಸಾಮೂಹಿಕ ಸತ್ಯನಾರಾಯಣ ಪೂಜೆ ಏರ್ಪಡಿಸಲಾಗಿತ್ತು.
ಸುಮಾರು ಇಪ್ಪತ್ತಕ್ಕೂ ಹೆಚ್ಚು ದಂಪತಿಗಳು ಸಾಮೂಹಿಕವಾಗಿ ಪೂಜೆಯಲ್ಲಿ ಪಾಲ್ಗೊಂಡರು.
ನಂತರ ನಡೆದ ಧಾರ್ಮಿಕ ಸಭೆ ಉದ್ಘಾಟಿಸಿ ದ ಹುಣಸಘಟ್ಟ ಹಾಲುಸ್ವಾಮಿ ಮಠದ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಮ್ಮ ಸಂಸ್ಕೃತಿಯ ಭಾಗವಾದ ಪೂಜೆಗಳನ್ನು ವೈಯುಕ್ತಿಕವಾಗಿ ಮಾಡುವುದು ಸಾಮಾನ್ಯ. ಆದರೆಆ ಲೋಕಕಲ್ಯಾಣಕ್ಕೆ ಪ್ರಾರ್ಥಿಸಿ ಸಾಮೂಹಿಕವಾಗಿ ಪೂಜಾವಕಾಶ ನೀಡುವ ವಿಶಾಲ ಮನೋಭಾವ ತೋರಿದ ಧರ್ಮಸ್ಥಳ ಯೋಜನೆಯ ಕಾರ್ಯ ಶ್ಲಾಘನೀಯವಾದದ್ದು ಎಂದರು.
ಯೋಜನಾಧಿಕಾರಿ ಬೇಬಿ ಯೋಜನಾ ವರದಿ ಮಂಡಿಸಿ ಮಾತನಾಡಿ,ಮಹಿಳೆಯರು ಸ್ವಾವಲಂಬಿಗಳಾಗಬೇಕೆಂಬ ನಿಟ್ಟಿನಲ್ಲಿ ಸಾಲ ಸೌಲಭ್ಯ ನೀಡುವುದಷ್ಟೇ ಯೋಜನೆಯ ಕಾರ್ಯಸೂಚಿಯಲ್ಲ. ಅದರ ಜೊತೆಗೆ ಹಲವಾರು ಸಾಮಾಜಿಕ ಕಾರ್ಯಗಳನ್ನೂ ಮಾಡಲಾಗುತ್ತಿದೆ. ಗ್ರಾಮಗಳ ಕೆರೆ ಅಭಿವೃದ್ಧಿ, ಅಶಕ್ತರಿಗೆ ಮಾಶಾಸನ, ಪ್ರೋತ್ಸಾಹ ಧನ ಹೀಗೆ ಹಲವಾರು ಕಾರ್ಯಗಳು ನಡೆಯುತ್ತಿವೆ.ಯೋಜನೆಯ ಕಾರ್ಯಚಟುವಟಿಕೆಗಳ ಜೊತೆ ನಮ್ಮ ಧಾರ್ಮಿಕ ಸಂಸ್ಕೃತಿಯನ್ನು ಉದ್ದೀಪನಗೊಳಿಸುವ ಕಾರ್ಯವನ್ನೂ ಮಾಡಲಾಗುತ್ತಿದೆ. ಅದರಲ್ಲಿ ಸತ್ಯನಾರಾಯಣ ಪೂಜೆ ಮುಖ್ಯವಾದದ್ದು. ಜನರಲ್ಲಿ ನಮ್ಮ ಸಂಸ್ಕೃತಿಯ ಬಗ್ಗೆ ಆಸಕ್ತಿ ಮತ್ತು ಹೆಮ್ಮೆ ಬೆಳೆಸುವ ಮತ್ತು ಎಲ್ಲರಿಗೂ ಒಳಿತಾಗಲೆಂದು ಪ್ರಾರ್ಥಿಸುವ ಸದಾಶಯ ಇಲ್ಲಿದೆ ಎಂದರು.
ಗ್ರಾಮಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಭರತ್ ರಾಜಾನಾಯ್ಕ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸ್ವರ್ಣಾಂಬ ದೇವಸ್ಥಾನದ ಧರ್ಮದರ್ಶಿ ಮಂಡಳಿ ಕಾರ್ಯದರ್ಶಿ ಎಂ.ವೈ.ಚಂದ್ರಶೇಖರ, ಬ್ಲೂ ಆರ್ಮಿ ಮಾದಿಗರ ಧ್ವನಿ ರಾಜ್ಯಾಧ್ಯಕ್ಷ ಶೂದ್ರಶ್ರೀನಿವಾಸ್, ಗ್ರಾಮಪಂಚಾಯಿತಿ ಸದಸ್ಯ ಎಂ.ಸಿ.ಮಾಲತೇಶ್, ಜನಜಾಗೃತಿ ಸಮಿತಿ ಜಿಲ್ಲಾಧ್ಯಕ್ಷೆ ಆಶಾ ತಮ್ಮಯ್ಯ,ಯೋಜನಾ ನಿರ್ದೇಶಕ ಸುಬ್ರಮಣ್ಯ, ಮಲ್ಲೇಶ್ವರ ನಟರಾಜ್, ಗಾಯಿತ್ರಿ ಮೋಹನ್ ಹಾಗೂ ಸೇವಾಪ್ರತಿನಿಧಿಗಳು ಇದ್ದರು.

Show quoted text

