ಕಡೂರು: ಕಠಿಣ ಪರಿಶ್ರಮದಿಂದ ಮಾತ್ರ ಉನ್ನತ ವ್ಯಕ್ತಿತ್ವ ಮತ್ತು ಸ್ಥಾನಮಾನ ಪಡೆಯಲು ಸಾಧ್ಯ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಶುಕ್ರವಾರ ಕಡೂರಿನ ಹೊರವಲಯದ ಪ್ರಜ್ಞಾ ಸೆಂಟ್ರಲ್ ಶಾಲೆಯ ಪ್ರಜ್ಞಾ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜೀವನಕ್ಕಾಗಿ ಶಿಕ್ಷಣ ಬಹುಮುಖ್ಯ. ಅದರ ಜೊತೆಗೇ ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜೊತೆ ಅವರಲ್ಲಿ ಅಂತರ್ಗತವಾಗಿರುವ ಕ್ರೀಡಾ,ಸಾಂಸ್ಕೃತಿಕ ಪ್ರತಿಭೆಯನ್ನು ಪ್ರೋತ್ಸಾಹಿಸುವ ಜೊತೆಗೆ ವೈಜ್ಞಾನಿಕ ಮನೋಭಾವವನ್ನು ಉದ್ದೀಪಿಸಬೇಕು. ಪೋಷಕರು ವಿದ್ಯಾರ್ಥಿಗಳ ಮೇಲೆ ಒತ್ತಡ ಹಾಕದೆ ಅವರಿಗೆ ಇಷ್ಟವಾದ ವಿಷಯದಲ್ಲೆ ಮುಂದುವರೆಯಲು ಪ್ರೋತ್ಸಾಹ ನೀಡಬೇಕು. ನಾವೇನಾಗಬೇಕೆಂಬುದು ನಮ್ಮ ನಿರ್ಧಾರವಾಗದೆ ವಿದ್ಯಾರ್ಥಿಗಳೇ ತಮ್ಮಿಷ್ಟದ ವಿಷಯದಲ್ಲಿ ಪರಿಣಿತರಾಗಲು ಅವಕಾಶ ನೀಡಬೇಕು. ಈ ನಿಟ್ಟಿನಲ್ಲಿ ಪ್ರಜ್ಞಾ ಶಾಲೆಯ ಕಾರ್ಯವೈಖರಿ ಮೆಚ್ಚುವಂತಹುದು ಎಂದರು.
ಮುಖ್ಯ ಅತಿಥಿ ಡಾ.ಮನೋಜ್ ಮಾತನಾಡಿ, ಶಿಕ್ಷಣ ಮತ್ತು ಆರೋಗ್ಯ ಎರಡೂ ಬಹುಮುಖ್ಯ. ವಿದ್ಯಾರ್ಥಿಗಳು ಶಿಕ್ಷಣದಷ್ಟೇ ಮಹತ್ವವನ್ನು ಆರೋಗ್ಯದತ್ತಲೂ ನೀಡಬೇಕಿದೆ. ಪೋಷಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ನೀಡುವ ಆಧ್ಯತೆಯನ್ನು ಆರೋಗ್ಯಕ್ಕೂ ನೀಡಬೇಕು ಎಂದರು.
ಶಾಲೆಯ ಮುಖ್ಯ ಕಾರ್ಯದರ್ಶಿ ಎನ್.ಪಿ.ಮಂಜುನಾಥ ಪ್ರಸನ್ನ ಮಾತನಾಡಿ, ಶಾಲೆಯ ಬೆಳವಣಿಗೆಗೆ ಪ್ರಬುದ್ಧ ಪೋಷಕರೂ ಬಹು ಮುಖ್ಯ. ಪ್ರಜ್ಞಾ ಶಾಲೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣಕ್ಕೆ ಆಧ್ಯತೆ ನೀಡಿದೆಯೇ ವಿನಃ ಇಲ್ಲಿ ಅನ್ಯ ವಿಷಯಗಳಿಗೆ ಪ್ರಾಮುಖ್ಯತೆ ನೀಡಿಲ್ಲ. ಮುಂದಿನ ಒಂದೆರಡು ವರ್ಷಗಳಲ್ಲಿ ಪದವಿಪೂರ್ವ ಶಿಕ್ಷ ತರಗತಿಗಳನ್ನು ಆರಂಭಿಸುವ ಚಿಂತನೆ ನಡೆಸಲಾಗಿದೆ ಎಂದರು.
ಈ ಸಂದರ್ಭದಲ್ಲಿ 2023-24 ನೇ ಸಾಲಿನಲ್ಲಿ ಉನ್ನತ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ಮುಖ್ಯ ಶಿಕ್ಷಕಿ ಶಿಲ್ಪಾ ಶಾಲಾ ವಾರ್ಷಿಕ ವರದಿ ಮಂಡಿಸಿದರು. ಶಾಲೆಯ ಆಡಳಿತ ಸಮಿತಿ ಅಧ್ಯಕ್ಷ ದೊಡ್ಮನೆ ರಾಜಣ್ಣ ,ಖಜಾಂಚಿ ಡಾ.ಶಿವಕುಮಾರ್, ಉಪಾಧ್ಯಕ್ಷ ಪ್ರಶಾಂತ್, ಶಿಕ್ಷಕಿ ಕವಿತಾ ಆನಂದ್, ದೀಕ್ಷಾ ಶಾಲೆಯ ನವೀನ್ ಡಿ.ಆಲ್ಮೆಡಾ, ಇದ್ದರು.
—————-
ಅತ್ಯಂತ ಸ್ಪರ್ದಾತ್ಮಕವಾಗಿರುವ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಶುಲ್ಕದಿಂದಾಗಿ ವಿದ್ಯಾರ್ಥಿಗಳನ್ನು ದೊಡ್ಡ ದೊಡ್ಡ ಕಾಲೇಜಿಗೆ ಸೇರಿಸಲು ಬಹಳಷ್ಟು ಪೋಷಕರಿಗೆ ಸಾಧ್ಯವಾಗುವುದಿಲ್ಲ. ಹಾಗಾಗಿ ಕಡೂರು ಪಟ್ಟಣದಲ್ಲೆ ಪದವಿಪೂರ್ವ ಕಾಲೇಜು ಆರಂಭಕ್ಕೆ ಈ ಶಾಲಾ ಆಡಳಿತ ಮಂಡಳಿ ಮುಂದಾದರೆ ಅದಕ್ಕೆ ಬೇಕಾದ ಸಹಕಾರವನ್ನು ನಮ್ಮ ಇತಿಮಿತಿಯಲ್ಲಿ ನೀಡುತ್ತೇನೆ.
– ಕೆ.ಎಸ್.ಆನಂದ್. ಶಾಸಕ.

