ಮುಖ್ಯಾಂಶಗಳು.
-ಡಾ.ವರುಣ್ ಐ.ಎನ್.ಐ.ಪ್ರವೇಶ ಪರೀಕ್ಷೆಯಲ್ಲಿ ರಾಷ್ಟ್ರಕ್ಕೆ ಎರಡನೇ ಸ್ಥಾನ.
– ವರುಣ್ ಕಡೂರಿನ ಹಿರಿಯ ವಕೀಲ ಕೆ.ಎನ್.ರಾಜಣ್ಣ ಅವರ ಪುತ್ರ.
-ವರುಣ್ ಕಡೂರಿನ ದೀಕ್ಷಾ ಶಾಲೆಯ ಹಳೆಯ ವಿದ್ಯಾರ್ಥಿ.
ಕಡೂರು: ಐಎನ್ಐ( ಇನ್ಸ್ ಟ್ಯೂಟ್ ಆಫ್ ನ್ಯಾಷನಲ್ ಇಂಪಾರ್ಟೆನ್ಸ್ )ಪರೀಕ್ಷೆಯಲ್ಲಿ ದೇಶಕ್ಕೆ ಎರಡನೇ ಸ್ಥಾನ ಪಡೆದಿರುವ ಡಾ.ವರುಣ್ ಅವರನ್ನು ಪ್ರಜ್ಞಾ ಸೆಂಟ್ರಲ್ ಸ್ಕೂಲ್ ಮತ್ತು ದೀಕ್ಷಾ ವಿದ್ಯಾಮಂದಿರದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ಪ್ರಜ್ಞಾ ಸೆಂಟ್ರಲ್ ಶಾಲೆಯ ಪ್ರಧಾನ ಕಾರ್ಯದರ್ಶಿ ಎನ್.ಪಿ.ಮಂಜುನಾಥ ಪ್ರಸನ್ನ ಮಾತನಾಡಿ, ನಮ್ಮ ದೀಕ್ಷಾ ಶಾಲೆಯಲ್ಲಿ ಓದಿದ ವಿದ್ಯಾರ್ಥಿ ವರುಣ್ ಇಂತಹ ಉನ್ನತ ಸಾಧನೆ ಮಾಡಿರುವುದು ನಮ್ಮ ಸಂಸ್ಥೆಗೆ ಹೆಮ್ಮೆ ತಂದಿದೆ. ಈ ಮೊದಲು ಈ ಶಾಲೆಯ ವಿದ್ಯಾರ್ಥಿನಿ ಯಶಸ್ವಿನಿ ಎಂಬುವವರು ಐಏಎಸ್ ಮಾಡಿದ್ದಾರೆ.ಕಡೂರಿನಂತಹ ಪ್ರದೇಶದ ವಿದ್ಯಾರ್ಥಿಗಳೂ ಇಂತಹ ಸಾಧನೆ ಮಾಡಬಹುದು ಎಂಬುದಕ್ಕೆ ವರುಣ್ ಸಾಕ್ಷಿಯಾಗಿದ್ದು, ಪ್ರಜ್ಞಾ ಮತ್ತು ದೀಕ್ಷಾ ವತಿಯಿಂದ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದರು.
ಡಾ.ವರುಣ್ ತಂದೆ ಕೆ.ಎನ್.ರಾಜಣ್ಣ ಮಾತನಾಡಿ, ಮಕ್ಕಳ ಸಾಧನೆ ಸಂತಸ ತಂದಿದೆ. ಏಷ್ಟೆ ಎತ್ತರಕ್ಕೆ ಬೆಳೆದರೂ ಸಮಾಜಕ್ಕೆ ಕೊಡುಗೆ ನೀಡಬೇಕು.ಆಗ ಆ ಸಾಧನೆಗೆ ಬೆಲೆ ಬರುತ್ತದೆ.ಮಾನವೀಯ ನೆಲೆಯಲ್ಲಿ ವೈದ್ಯಕೀಯ ವೃತ್ತಿ ಕೈಗೊಳ್ಳಲಿ ಎಂವುದಷ್ಟೆ ನನ್ನ ಆಶಯ ಎಂದರು.
ದೀಕ್ಷಾ ಶಾಲೆಯ ನವೀನ್ ಡಿ.ಆಲ್ಮೆಡಾ, ಡಿ.ಪ್ರಶಾಂತ್ ಇದ್ದರು.
—————–
ಡಾ.ವರುಣ್ ಅವರು ಪಟ್ಟಣದ ವಕೀಲ ಕೆ.ಎನ್.ರಾಜಣ್ಣ ಅವರ ಪುತ್ರ. ದೀಕ್ಷಾ ಶಾಲೆಯ ಹಳೆಯ ವಿದ್ಯಾರ್ಥಿಯಾದ ವರುಣ್, ಹತ್ತನೇ ತರಗತಿಯ ನಂತರ ಮಂಗಳೂರು ಎಕ್ಸ್ಪರ್ಟ್ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿದರು. ಬೆಂಗಳೂರು ಮೆಡಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ವ್ಯಾಸಂಗ ಮಾಡಿ ನಂತರ ಪಾಂಡಿಚೆರಿಯಲ್ಲಿ ಎಂ.ಎಸ್. ಪದವಿ ಪಡೆದು ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಕೆಲ ಸಮಯ ಕೆಲಸ ಮಾಡಿದರು. ಕಡೂರಿನ ಬಸವೇಶ್ವರ ಆಸ್ಪತ್ರೆಯಲ್ಲಿ ಅನುಭವಿ ತಜ್ಞ ಡಾ.ಟೀಕಪ್ಪ ಅವರೊಡನೆ ಬಹಳಷ್ಟು ಅನುಭವ ಪಡೆದುಕೊಂಡರು.
ಸ್ನಾತಕೋತ್ತರ ಪದವಿ( ಎಂ.ಎಸ್) ಪಡೆದ ನಂತರ ಸೂಪರ್ ಸ್ಪೆಷಾಲಿಟಿ ಕೋರ್ಸ್ ಮಾಡಲು ಪೂರ್ವಭಾವಿಯಾಗಿ ಐಎನ್ಐ ನಡೆಸುವ ಪ್ರವೇಶ ಪರೀಕ್ಷೆ ಬರೆಯುವ ಅಗತ್ಯವಿದೆ. ಮೂತ್ರಪಿಂಡದ ಚಿಕಿತ್ಸೆ( ಯೂರಾಲಜಿ) ಬಗ್ಗೆ ಹೆಚ್ಚಿನ ಅಧ್ಯಯನ, ಸಂಶೋಧನೆ ನಡೆಸಲು ಈ ಪರೀಕ್ಷೆ ಬಹು ಮುಖ್ಯ. ಅಲ್ಲಿ ಬಹಳಷ್ಟು ಪೈಪೋಟಿಯಿದೆ. ಅದಕ್ಕಾಗಿ ನಡೆದ ಪರೀಕ್ಷೆಗೆ ಹಾಜರಾಗಿ ಅಖಿಲ ಭಾರತ ಮಟ್ಟದಲ್ಲಿ ಎರಡನೇ ಸ್ಥಾನ ಪಡೆದರು. ಕಡೂರಿನ ವೈದ್ಯರೊಬ್ಬರು ಈ ಸಾಧನೆ ಮಾಡಿರುವುದು ಬಹುಶಃ ಇದೇ ಮೊದಲು ಎಂಬುದು ವಿಶೇಷ.

ಡಾ.ವರುಣ್ ಮಾತನಾಡಿ, ಈ ಸಾಧನೆ ಮಾಡಲು ಸಹಕರಿಸಿದ ಎಲ್ಲ ವಿದ್ಯಾ ಸಂಸ್ಥೆಗಳಿಗೆ ನನ್ನ ಕೃತಜ್ಞತೆ ಸಲ್ಲಿಸುವೆ.ವೈದ್ಯಕೀಯ ಶಿಕ್ಷಣ ಪಡೆಯಲು ಕಠಿಣ ಪರಿಶ್ರಮ ಬೇಕು. ಸತತ ಅಧ್ಯಯನ ಮತ್ತು ಪರಿಶ್ರಮದಿಂದ ಸಾಧನೆ ಮಾಡಬಹುದು. ಹುಟ್ಟಿನಿಂದಲೇ ಯಾರೂ ಬುದ್ದಿವಂತರಾಗಿರುವುದಿಲ್ಲ. ಅದನ್ನು ಸ್ವಪರಿಶ್ರಮದಿಂದ ಬೆಳೆಸಿಕೊಳ್ಳಬೇಕು. ಸಾಧಿಸಿದ ನಂತರ ಸಾಮಾಜಿಕವಾಗಿ ಒಂದಿಷ್ಟು ಕೊಡುಗೆ ನೀಡಬೇಕು. ತಮ್ಮ ವಿದ್ಯೆ ಸಮಾಜಕ್ಕೂ ಅತ್ಯುತ್ತಮ ಕೊಡುಗೆಯಾಗಬೇಕು ಎಂಬುದನ್ನು ಯುವಜನತೆ ಅರಿಯಬೇಕು.ವೈದ್ಯಕೀಯ ಶಿಕ್ಷಣ ಪಡೆದವರು ಖ್ಯಾತಿ ಪಡೆದ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಲು ಮುಂದಾಗುತ್ತಾರೆ. ಆದರೆ ವೈದ್ಯರ ಕೆಲಸ ಕೇವಲ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆಗಷ್ಟೆ ಸೀಮಿತವಾಗಿರುತ್ತದೆ , ಆಸ್ಪತ್ರೆಯ ಆಡಳಿತ ಸಮಿತಿಯೇ ರೋಗಿಯ ಚಿಕಿತ್ಸಾ ವೆಚ್ಚ ಎಲ್ಲವನ್ನು ನಿರ್ಧರಿಸುತ್ತದೆ. ವೈದ್ಯರಿಗೂ ಅವರದೇ ಭಾವನೆಗಳಿದ್ದರೂ ಅದಕ್ಕೆ ಪ್ರಾಮುಖ್ಯತೆಯಿರುವುದಿಲ್ಲ. ಕೇವಲ ಯಾಂತ್ರಿಕವಾಗಿ ವೈದ್ಯರು ತಮ್ಮ ಕಾರ್ಯ ಮಾಡುತ್ತಾರೆ. ವೈದ್ಯರು ತಮ್ಮದೇ ಸ್ವಂತ ಆಸ್ಪತ್ರೆಯಿದ್ದರೆ ಮಾತ್ರ ರೋಗಿಯ ಆರ್ಥಿಕ ಸ್ಥಿತಿಯನ್ನು ಗಮನಿಸಿ ಅವರಿಗೆ ಸಾಧ್ಯವಾದಷ್ಟು ಸಹಾಯ ಮಾಡಬಹುದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಾವು ಓದಿದ ದೀಕ್ಷಾ ಶಾಲೆಯ ಆಡಳಿತ ಮಂಡಳಿಗೆ ಪ್ರಥಮ ಕೃತಜ್ಞತೆ ಸಲ್ಲುತ್ತದೆ. ಜೊತೆಗೆ ತಾವು ವ್ಯಾಸಂಗ ಮಾಡಿದ ಎಲ್ಲ ಸಂಸ್ಥೆಗಳು, ಮುಖ್ಯವಾಗಿ ವೈದ್ಯಕೀಯ ವೃತ್ತಿ ಅನುಭವ ಪಡೆಯಲು ಅವಕಾಶ ನೀಡಿದ ಡಾ.ಶಿವಕುಮಾರ್ ಅವರಿಗೆ ನನ್ನ ಕೃತಜ್ಞತೆಗಳನ್ನು ತಿಳಿಸುತ್ತೇನೆ ಎಂದರು.

