ಮುಖ್ಯಾಂಶಗಳು.
– ಬಯಲು ಭಾಗದ ಕಡೆಯ ರಥೋತ್ಸವ..
-12 ಹರಿವಾಣ ಗುಡಕಟ್ಟಿನವರು ಮತ್ತು ಸಾವಿರಾರು ಭಕ್ತರು ಭಾಗಿ.
– 3.25 ಲಕ್ಷ ರೂಪಾಯಿಗಳಿಗೆ ಸ್ವಾಮಿ ಬಾವುಟ ಖರೀದಿಸಿದ ಮಲ್ಲೇಶ್ವರದ ವಸಂತಕುಮಾರ್.
ಕಡೂರು : ಬಯಲು ಭಾಗದಲ್ಲಿ ವರ್ಷದ ಕಡೆಯ ಜಾತ್ರಾ ಮಹೋತ್ಸವವೆನಿಸಿದ ಪಟ್ಟಣದ ದೊಡ್ಡಪೇಟೆಯ ವೀರಭದ್ರೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ಶ್ರದ್ಧಾಭಕ್ತಿಯೊಡನೆ ನೆರವೇರಿತು.
ಬೆಳಿಗ್ಗೆ ವೀರಭದ್ರಸ್ವಾಮಿ ದೇವಾಲಯದಲ್ಲಿ ವಿಶೇಷಪೂಜೆ. ಧಾರ್ಮಿಕ ಪೂಜಾ ಕಾರ್ಯಕ್ರಮ ಜರುಗಿ, ನಂತರ ಕೆಂಚಾಂಬ ದೇವಸ್ಥಾನದ ಬಳಿಯಿದ್ದ ಆಲಂಕೃತ ರಥದಲ್ಲಿ ವೀರಭದ್ರಸ್ವಾಮಿ ಭದ್ರಕಾಳಮ್ಮ ದೇವಿಯು ಉತ್ಸವಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು. ಪ್ರಧಾನಗುರುಗಳಾದ ಎಚ್.ಎಂ. ಲೋಕೇಶ್ ನೇತೃತ್ವದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ಬಳಿಕ 12 ಹರಿವಾಣದ ಗುಡಕಟ್ಟಿನ ಸಮಿತಿಯ ಅಧ್ಯಕ್ಷ ಭರತ್ಕೆಂಪರಾಜ್ ಬಲಿಪ್ರಧಾನದ ಅಂಬು ಹೊಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಶಾಸಕ ಕೆ.ಎಸ್.ಆನಂದ್ ರಥಕ್ಕೆ ತಾಲ್ಲೂಕಿನ ಜನತೆಯ ಪರವಾಗಿ ಪೂಜೆ ಸಲ್ಲಿಸಿದ ನಂತರ ಭಕ್ತರು ಉತ್ಸಾಹದಿಂದ ರಥವನ್ನು ಎಳೆದು ಸಂಭ್ರಮಿಸಿದರು.
ರಥೋತ್ಸವದಲ್ಲಿ ಮಲ್ಲೇಶ್ವರದ ಸ್ವರ್ಣಾಂಭ ದೇವಿ, ಚೌಡ್ಲಾಪುರದ ಕರಿಯಮ್ಮದೇವಿ, ಬನಶಂಕರಿ ಹಾಗೂ ಕೆಂಚಾಂಬಿಕಾ, ತುರುವನಹಳ್ಳಿಯ ಭೈರೇಶ್ವರ ದೇವರ ಉಪಸ್ಥಿತಿಯಿತ್ತು.
ಸ್ವಾಮಿಯ ಬಾವುಟ ಹರಾಜು ಪ್ರಕ್ರಿಯೆಯಲ್ಲಿ 3.25 ಲಕ್ಷ ರೂಪಾಯಿಗಳಿಗೆ ಮಲ್ಲೇಶ್ವರ ವಸಂತಕುಮಾರ್ ಹರಾಜು ಕೂಗುವ ಮೂಲಕ ಬಾವುಟವನ್ನು ಈ ಬಾರಿ ತಮ್ಮದಾಗಿಸಿಕೊಂಡರು.
ಪುರಸಭಾ ಅಧ್ಯಕ್ಷ ಭಂಡಾರಿಶ್ರೀನಿವಾಸ್, ದೇವಸ್ಥಾನ ಸಮಿತಿಯ ಕಾರ್ಯಾಧ್ಯಕ್ಷ ಶರತ್ಕೃಷ್ಣಮೂರ್ತಿ, ಪುರಸಭಾ ಸದಸ್ಯರಾದ ತೋಟದಮನೆ ಮೋಹನ್ಕುಮಾರ್, ಈರಳ್ಳಿರಮೇಶ್, ಹಾಲಮ್ಮಸಿದ್ರಾಮಪ್ಪ, ಸಮಿತಿಯ ಪದಾಧಿಕಾರಿಗಳಾದ ಕೆ.ಜಿ.ಲೋಕೇಶ್ವರ್, ಪಂಗ್ಲಿ ಮಂಜು, ಸತೀಶ್, ಚೇತನ್, ದಳವಾಯಿ ನಿರಂಜನ್ , ಕರಿಬಡ್ಡೆ ರಾಜು ಇದ್ದರು.
