ಕಡೂರು: ಕಾಡು ನಾಡಾಗಿ ಪರಿಸರ ಸಂರಕ್ಷಣೆ ಮಾಡುವಂತಹ ಪರಿಸ್ಥಿತಿಗೆ ಬಂದಿರುವುದು ಶೋಚನೀಯ ಸಂಗತಿ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಇರ್ಫಾನ್ ಹೇಳಿದರು.
ಜ್ಞಾನಭಾರತಿ ಶಿಕ್ಷಣ ಸಮೂಹ ಸಂಸ್ಥೆ ವಿಶ್ವಪರಿಸರ ದಿನದ ಪ್ರಯುಕ್ತ ಗುರುವಾರ ಮಂಗೇರಮ್ಮ ದೇವಸ್ಥನದ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾಡು ನಾಶವಾಗಿ ಈಗ ಪರಿತಪಿಸುವಂತಹ ಪರಿಸ್ಥಿತಿ ನಮ್ಮದಾಗಿದೆ. ಅಭಿವೃದ್ಧಿ ಅತ್ಯಂತ ಅವಶ್ಯಕ.ಅದರ ಜೊತೆ ಪರಿಸರವೂ ಬಹು ಮುಖ್ಯ. ವಿದ್ಯಾರ್ಥಿಗಳು ತಮ್ಮ ಓದಿನ ಜೊತೆ ಪರಿಸರ ಸಂರಕ್ಷಣೆಯನ್ನೂ ಸಹ ಆಧ್ಯತೆಯಾಗಿ ಪರಿಗಣಿಸಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶರತ್ ಕೃಷ್ಣಮೂರ್ತಿ ಮಾತನಾಡಿ, ಪರಿಸರ ಸಂರಕ್ಷಣೆಯ ವಿಚಾರದಲ್ಲಿ ನಾವೆಲ್ಲರೂ ತೀರ ಹಿಂದುಳಿದಿದ್ದೇವೆಂಬುದು ವಾಸ್ತವ ಸಂಗತಿ. ನಮ್ಮ ಜೀವನ ಆರೋಗ್ಯಕರವಾಗಿ ಸಾಗಲು ಪರಿಸರ ಬಹುಮುಖ್ಯ. ನಮ್ಮ ಒಡನಾಡಿಯಂತೆ ಗಿಡಮರಗಳನ್ನು ಪೋಷಿಸಿ ಉಳಿಸಿದರೆ ಪರಿಸರಕ್ಕೆ ಬಹುದೊಡ್ಡ ಕೊಡುಗೆಯಾಗುತ್ತದೆ. ಸಾಲುಮರದ ತಿಮ್ಮಕ್ಕ ನಮಗೆಲ್ಲ ಆದರ್ಶ. ಈ ನಿಟ್ಟಿನಲ್ಲಿ ಜ್ಞಾನಭಾರತಿ ಶಿಕ್ಷಣ ಸಮೂಹ ಸಂಸ್ಥೆಗಳು ಪರಿಸರ ಸಂರಕ್ಷಣೆಯ ಅರಿವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಲು ಸದಾ ಕ್ರಿಯಾಶೀಲವಾಗಿದೆ ಎಂದರು.
ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಎಚ್. ಸವಿತಾರಾಣಿ , ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ತಹಾ ಖಲೀಲ್, ವಲಯ ಅರಣ್ಯಾಧಿಕಾರಿ ಹರೀಶ್, ಮಂಗೇರಮ್ಮ ದೇವಸ್ಥಾನ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು ಇದ್ದರು.
