
ಕಡೂರು:ದೇಶದಲ್ಲಿ ಕೊರೊನಾ ಮತ್ತೆ ವ್ಯಾಪಿಸುತ್ತಿದೆ. ಹಿಂದಿನ ಕೊರೊನಾ ಕಾಲಘಟ್ಟದ ಕರಾಳ ನೆನಪು ಜನಮಾನಸದಿಂದ ದೂರವಾಗಿಲ್ಲ. ಇದರ ನಡುವೆ ಬೆಂಗಳೂರಿನಲ್ಲಿ ಕೊರೊನಾ ದಿನೇ ದಿನೇ ಹೆಚ್ಚಾಗುತ್ತಿದೆ. ಚಿಕ್ಕಮಗಳೂರಿನಲ್ಲೂ ಒಂದು ಪ್ರಕರಣ ಪತ್ತೆಯಾಗಿರುವುದು ಕಾಫಿನಾಡಿಗೆ ಆತಂಕದ ಸುದ್ದಿಯಾಗಿದೆ.
ಇದನ್ನು ತಡೆಯಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಮಾರ್ಗಸೂಚಿ ಪ್ರಕಟಿಸಿದೆ. ಇವೆಲ್ಲದರ ಜೊತೆ ಪಟ್ಟಣದ ನೈರ್ಮಲ್ಯ ಕಾಪಾಡಲು ಪುರಸಭೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ. ಕೈಗೊಂಡಿದೆ ಕೂಡಾ. ಆದರೆ ಪುರಸಭೆಯ ಕ್ರಮಗಳಿಗೆ ಸಾರ್ವಜನಿಕ ಸಹಕಾರವೂ ಅತ್ಯಗತ್ಯ.
ಪಟ್ಟಣದ ಬಿಇಓ ಕಚೇರಿ ಆವರಣದ ಗೋಡೆಯ ಪಕ್ಕದಲ್ಲಿ ಕಸದ ರಾಶಿ ನಿತ್ಯವೂ ಇರುತ್ತದೆ. ಈ ರಸ್ತೆಯಲ್ಲಿರುವ ಅಂಗಡಿಗಳು, ರಸ್ತೆ ಬದಿ ಮಾರಾಟಗಾರರು ನಿತ್ಯದ ತ್ಯಾಜ್ಯವನ್ನು ಇಲ್ಲಿ ಸುರಿಯುತ್ತಾರೆ. ಇದೇ ತ್ಯಾಜ್ಯವನ್ನು ವಿಂಗಡಿಸಿ ಕಸ ಸಂಗ್ರಹಣಾ ವಾಹನಕ್ಕೆ ಹಾಕಲು ಇರುವ ತೊಂದರೆಯೇನೆಂಬುದು ತಿಳಿಯುತ್ತಿಲ್ಲ.
ಪುರಸಭೆ ಹೀಗೆ ಕಸ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
ಬಹುಮುಖ್ಯವಾಗಿ ಕಸ ಹಾಕುವವರು ಒಂದಿಷ್ಟು ಯೋಚಿಸಬೇಕು. ಸ್ವಪ್ರೇರಣೆಯಿಂದ ಕಸ ಅಥವಾ ತ್ಯಾಜ್ಯವನ್ನು ಕಸ ಸಂಗ್ರಹಣಾ ವಾಹನಕ್ಕೆ ನೀಡಲು ಮುಂದಾಗಬೇಕಿದೆ.
