ಕಡೂರು: ಜಿಲ್ಲಾ ಮಟ್ಟದ ಭಗೀರಥ ಜಯಂತಿ ಕಾರ್ಯಕ್ರಮವನ್ನು ಕಾರಣಾಂತರಗಳಿಂದ ಮುಂದೂಡಲಾಗಿದ್ದು ಶೀಘ್ರದಲ್ಲಿ ಕಾರ್ಯಕ್ರಮದ ಮುಂದಿನ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಉಪ್ಪಾರ ಸಮಾಜದ ಮುಖಂಡ ಜಿ ಡಿ ಶಂಕರಪ್ಪ ಹೇಳಿದರು.
ಈ ಕುರಿತು ಮಂಗಳವಾರ ಮಾಹಿತಿ ನೀಡಿದ ರವರು, ಮೇ 26ರ ಸೋಮವಾರ ತಾಲೂಕಿನ 9ನೇ ಮೈಲಿ ಕಲ್ಲಿನಲ್ಲಿ ಜಿಲ್ಲಾ ಮಟ್ಟದ ಭಗೀರಥ ಜಯಂತಿಯನ್ನು ಏರ್ಪಡಿಸಲಾಗಿತ್ತು. ಭಗೀರಥ ಉಪ್ಪಾರ ಪೀಠದ ಪುರುಷೋತ್ತಮ ನಂದಪುರಿ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಸರ್ವ ಸಮಾಜದ ಸಹಕಾರದೊಂದಿಗೆ ಭಗೀರಥ ಜಯಂತಿ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಶಾಸಕ ಆನಂದ್ ಮತ್ತು ನಿಖಿಲ್ ಕುಮಾರ ಸ್ವಾಮಿ, ವೈ ಎಸ್ ವಿ ದತ್ತ, ಭಂಡಾರಿ ಶ್ರೀನಿವಾಸ್ ಮುಂತಾದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದರು. ಆದರೆ ನಿರಂತರ ಮಳೆ ಸುರಿದ ಕಾರಣ ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ಮಲ್ನಾಡ್ ನಾಗರಾಜ್ ಮತ್ತು ತಾಲೂಕು ಘಟಕದ ಅಧ್ಯಕ್ಷ ಲೋಕೇಶ್ ಬಾಬು ಅವರ ಉಪಸ್ಥಿತಿಯಲ್ಲಿ ಸಭೆ ನಡೆಸಿ ಕಾರ್ಯಕ್ರಮವನ್ನು ಮುಂದೂಡುವ ನಿರ್ಧಾರ ಮಾಡಲಾಯಿತು ಎಂದರು.
ಜಿಲ್ಲಾ ಉಪ್ಪಾರ ಸಂಘ ತಾಲೂಕು ಸಂಘಗಳ ಮತ್ತು ಉಪ್ಪಾರ ಮುಖಂಡರ ಸಭೆಯನ್ನು ನಡೆಸಿ ಕಾರ್ಯ ಕ್ರಮದ ದಿನಾಂಕವನ್ನು ನಿಗದಿ ಪಡಿಸುತ್ತದೆ. ಸಮಾಜದ ಮುಖಂಡರು ಮತ್ತು ಎಲ್ಲಾ ಸಮಾಜಗಳ ಬಂಧುಗಳು ಸಹಕರಿಸಬೇಕು ಎಂದು ಅವರು ಕೋರಿದರು.
