ಕಡೂರು: ಆನೆ ಮತ್ತು ಮಾವುತನ ನಡುವಿನ ಸಂವಹನ ಹಾಗೂ ಬುಡಕಟ್ಟು ಜನಾಂಗವೊಂದರ ಆಚಾರ, ಅಸ್ತಿತ್ವ ಉಳಿಸಿಕೊಳ್ಳುವ ಅವರ ಪ್ರಯತ್ನ ಎಲ್ಲವನ್ನೂ ಕ್ರೋಡೀಕರಿಸಿದ ಕಥಾವಸ್ತುವನ್ನು ಹೊಂದಿದ ಮಾವುತ ಚಲನ ಚಿತ್ರವನ್ನು ಕನ್ನಡದ ಜನತೆ ಹರಸಬೇಕು ಎಂದು ಚಿತ್ರದ ನಿರ್ದೇಶಕ ರವಿಶಂಕರ್ ನಾಗ್ ಮನವಿ ಮಾಡಿದರು.
ಬಿಡುಗಡೆಗೆ ಸಿದ್ದವಾಗಿರುವ ಮಾವುತ ಚಲನಚಿತ್ರದ ತಂಡದೊಡನೆ ಕಡೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಭಿನ್ನ ಕಥಾವಸ್ತುವನ್ನಿಟ್ಟುಕೊಂಡು, ನುರಿತ ಅತ್ಯಂತ ಸುಂದರ ಪರಿಸರದಲ್ಲಿ ಬಹುದೊಡ್ಡ ಚಲನಚಿತ್ರ ನಿರ್ಮಾಣ ಮಾಡಲಾಗಿದೆ. ಕನ್ನಡ ಜನತೆ ಈ ಚಿತ್ರಕ್ಕೆ ಪ್ರೋತ್ಸಾಹ ನೀಡುತ್ತಾರೆಂಬ ಆಶಯ ನಮ್ಮದಾಗಿದೆ ಎಂದರು.
ಲಕ್ಷ್ಮೀಪತಿ ಬಾಲಾಜಿ
ನಾಯಕ ನಟ ಲಕ್ಷ್ಮೀಪತಿ ಬಾಲಾಜಿ ಮಾತನಾಡಿ, ಕಡೂರಿನ ಗೋವಿಂದ ಪುರ ಗ್ರಾಮ ನನ್ನ ಸ್ವಂತ ಊರಾಗಿದ್ದು, ಈ ಚಲನ ಚಿತ್ರಕ್ಕಾಗಿ ಇಡೀ ಚಿತ್ರ ತಂಡ ಬಹಳ ಶ್ರಮಪಟ್ಟಿದೆ. ಚಿತ್ರದಲ್ಲಿ ಇಂದಿನ ದಿನಮಾನಕ್ಕೆ ಬೇಕಾದದ್ದೆಲ್ಲವೂ ಇದೆ. ಮೈಸೂರು ಅಂಬಾರಿ ಹೊರುತ್ತಿದ್ದ ಅರ್ಜುನನ ನೆನಪಿನಲ್ಲಿ ಈ ಚಲನಚಿತ್ರ ತಯಾರಾಗಿದೆ. ಬಹುಶಃ ಕನ್ನಡ ಚಲನಚಿತ್ರ ರಂಗದಲ್ಲಿ ಈ ಚಿತ್ರ ಅತ್ಯಂತ ಯಶಸ್ವಿ ಚಿತ್ರವಾಗಲಿದೆ. ಜನವರಿ 30 ರಂದು ರಾಜ್ಯದಾದ್ಯಂತ ಚಿತ್ರ ಬಿಡುಗಡೆಯಾಗಲಿದ್ದು, ಕನ್ನಡ ಜನತೆ ಚಿತ್ರವನ್ನು ಗೆಲ್ಲಿಸುತ್ತಾರೆಂಬ ಭರವಸೆ ನನ್ನದು ಎಂದರು.
ಮಹಾಲಕ್ಷ್ಮಿ
ನಾಯಕ ನಟಿ ಮಹಾಲಕ್ಷ್ಮಿ ಮಾತನಾಡಿ, ಬುಡಕಟ್ಟು ಜನಾಂಗದ ಹೆಣ್ಣಾಗಿ ಪಾತ್ರ ನಿರ್ವಹಿಸಿದ್ದೇನೆ. ಪದ್ಮಾವಾಸಂತಿ,ಥ್ರಿಲ್ಲರ್ ಮಂಜು ಅವರಂಥಹ ಹಿರಿಯ ಕಲಾವಿದರು ನಟಿಸಿರುವ ಒಂದು ಒಳ್ಳೆಯ ಚಿತ್ರದಲ್ಲಿ ಅಭಿನಯಿಸಿದ ತೃಪ್ತಿಯಿದೆ.ಕಲಾವಿದರ ಶ್ರಮಕ್ಕೆ ಜನತೆ ಪ್ರೋತ್ಸಾಹಿಸಬೇಕು ಎಂದುರು.
ರುದ್ರೇಗೌಡ
ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ರುದ್ರೇಗೌಡ ಪ್ರಸ್ತಾವಿಕವಾಗಿ ಮಾತನಾಡಿದರು.
ಗೋಪಿಕೃಷ್ಣ, ಸಿ.ವಿ.ಆನಂದ್, ನಟರಾಜು, ಪುರಸಭೆ ಮಾಜಿ ಸದಸ್ಯ ಶ್ರೀಕಾಂತ್ ಮತ್ತಿತರರು ಇದ್ದರು.
