ಪಿ.ಸಿ.ಪ್ರಸನ್ನ.
ಕಡೂರು: ಇಂದಿರಾ ಕ್ಯಾಂಟೀನ್ ಬಡವರು ಮತ್ತು ಶ್ರಮಿಕ ವರ್ಗದವರಿಗೆ ಕಡಿಮೆ ದರದಲ್ಲಿ ಆಹಾರ ಒದಗಿಸುವ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಅದರ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಪ್ರಮಾಣಿಕವಾಗಿ ಶ್ರಮಿಸುತ್ತೇನೆ ಎಂದು ರಾಜ್ಯಮಟ್ಟದ ಇಂದಿರಾ ಕ್ಯಾಂಟೀನ್ ಮೇಲ್ವಿಚಾರಣೆ ಹಾಗೂ ಗುಣಮಟ್ಟ ಪರಿಶೀಲನಾ ಸ್ಟೀರಿಂಗ್ ಸಮಿತಿ ಅಧ್ಯಕ್ಷ ಪಂಚನಹಳ್ಳಿ ಪ್ರಸನ್ನ ತಿಳಿಸಿದರು.
ಕಡೂರಿನಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ರಾಜ್ಯದಾದ್ಯಂತ ಇರುವ ಇಂದಿರಾ ಕ್ಯಾಂಟೀನ್ ಗಳ ಉದ್ದೇಶ ಬಡಜನರಿಗೆ ಕೈಗೆಟಕುವ ದರದಲ್ಲಿ ಉಪಹಾರ ಮತ್ತು ಊಟವನ್ನು ಒದಗಿಸುವುದಾಗಿದೆ. ಈ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸರ್ಕಾರ ರಾಜ್ಯ ಮಟ್ಟದಲ್ಲಿ ಸ್ಟೀರಿಂಗ್ ಸಮಿತಿ ರಚಿಸಿದೆ.ಇಂದಿರಾ ಕ್ಯಾಂಟೀನ್ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಈ ಸಮಿತಿ ನಿಗಾ ವಹಿಸುತ್ತದೆ. ಈ ಸಮಿತಿಗೆ ಅಧ್ಯಕ್ಷರನ್ನಾಗಿ ನನ್ನನ್ನು ಆಯ್ಕೆ ಮಾಡಿ ಜವಾಬ್ದಾರಿ ನೀಡಿದ ರಾಜ್ಯ ಸರ್ಕಾರಕ್ಕೆ,ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ,ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಶಾಸಕ ಕೆ.ಎಸ್.ಆನಂದ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಸಮಿತಿಯ ಪದಗ್ರಹಣ ಜನವರಿ 21 ರಂದು ಬೆಂಗಳೂರಿನ ವಿಶ್ವೇಶ್ವರಯ್ಯ ಗೋಪುರದ ಸಭಾಂಗಣದಲ್ಲಿ ನಡೆಯಲಿದ್ದು,ಅಂದಿನಿಂದಲೇ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಆಸಂದಿ ಕಲ್ಲೇಶ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಸೂರು ಚಂದ್ರಮೌಳಿ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಉಪಾಧ್ಯಕ್ಷ ಸಿದ್ದರಾಮನಹಳ್ಳಿ ಅಬೀದ್, ಯುವ ಕಾಂಗ್ರೆಸ್ ಸದಸ್ಯರಾದ ಮುರಳಿ,ಸಂಜೀವ್, ಗೋವಿಂದು,ಸಂತೋಷ್ ಮತ್ತಿತರರು ಇದ್ದರು.

ಇಂದಿರಾ ಕ್ಯಾಂಟೀನ್ ರಾಜ್ಯ ಮಟ್ಟದ ಸ್ಟೀರಿಂಗ್ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಪಿ.ಸಿ.ಪ್ರಸನ್ನ ಅವರನ್ನು ಕಾಂಗ್ರೆಸ್ ಮುಖಂಡರು ಅಭಿನಂದಿಸಿದರು.
————-
ರಾಜ್ಯ ಮಟ್ಟದ ಸ್ಟೀರಿಂಗ್ ಸಮಿತಿ.
ಅಧ್ಯಕ್ಷರು: ಪಿ.ಸಿ.ಪ್ರಸನ್ನ.
ಸದಸ್ಯರು: ಪೀರಪ್ಪ ಶಿವನಪ್ಪ ತಳವಾರ.ಬೆಳಗಾವಿ.
ಸತೀಶ್ ಜಿನಗ.ರಾಮದುರ್ಗ.ಬೆಳಗಾವಿ.
