ಕಡೂರು: ಮುಂಬರಲಿರುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕಡೂರು ಶೈಕ್ಷಣಿಕ ವಲಯ ಅತ್ಯುತ್ತಮ ಫಲಿತಾಂಶ ನೀಡಬೇಕೆಂಬ ನಿಟ್ಟಿನಲ್ಲಿ ಪ್ರತಿ ಶಿಕ್ಷಕರೂ ಗುರಿ ಸಾಧಿಸಲು ಶ್ರಮ ವಹಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂಎಚ್.ತಿಮ್ಮಯ್ಯ ಹೇಳಿದರು.
ಕಡೂರಿನ ಬಿಜಿಎಸ್ ಶಾಲೆಯಲ್ಲಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಪಡೆಯಲು ಶಿಕ್ಷಣ ಇಲಾಖೆಯ ಮಾರ್ಗಸೂಚಿ ಕುರಿತು ಮಂಗಳವಾರ ಪ್ರೌಢ ಶಾಲಾ ಶಿಕ್ಷಕರಿಗೆ ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಪ್ರತಿ ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿಯನ್ನು ವೈಯುಕ್ತಿಕವಾಗಿ ಗಮನಿಸಿ ಅವರಿಗೆ ಪಠ್ಯ ವಿಷಯದಲ್ಲಿ ಯಾವುದೇ ಸಮಸ್ಯೆ ಅನುಮಾನಗಳಿದ್ದರೆ ಅವುಗಳನ್ನು ಪರಿಹರಿಸಲು ವಿಶೇಷ ಮಾರ್ಗಸೂಚಿಯನ್ನು ಶಿಕ್ಷಣ ಇಲಾಖೆ ಸಿದ್ದಪಡಿಸಿದೆ. ಆ ಮಾರ್ಗಸೂಚಿಗಳನ್ನು ಶಿಕ್ಷಕರಿಗೆ ಮನದಟ್ಟು ಮಾಡಿ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿ,ಅವರನ್ನು ಪರೀಕ್ಷೆಗೆ ಸಿದ್ದಪಡಿಸುವ ಕಾರ್ಯವನ್ನು ಶಿಕ್ಷಕರು ಮಾಡಲಿದ್ದಾರೆ ಎಂದರು.
ಈಗಾಗಲೇ ಸಮಾಜ, ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ಶಿಕ್ಷಕರು ಅನುಸರಿಸಬೇಕಾದ ಕ್ರಮಗಳ ಕುರಿತು ಕಾರ್ಯಾಗಾರ ಮುಗಿದಿದ್ದು ಒಟ್ಟು 225 ಶಿಕ್ಷಕರು ಭಾಗವಹಿಸಿದ್ದಾರೆ. ಇಂದು ಕನ್ನಡ,ಇಂಗ್ಲಿಷ್ ಮತ್ತು ಹಿಂದಿ ವಿಷಯಗಳ ಕಾರ್ಯಾಗಾರ ನಡೆದಿದೆ.ಒಟ್ಟು 189 ಶಿಕ್ಷಕರು ಭಾಗವಹಿಸಿದ್ದಾರೆ. ಒಟ್ಟಾರೆ ಈ ಬಾರಿಯ ಎಸ್.ಎಸ್.ಎಲ್.ಸಿ.ಫಲಿತಾಂಶ ಅತ್ಯುತ್ತಮವಾಗಿರಬೇಕು.ಕಳೆದ ಬಾರಿ ಜಿಲ್ಲೆಯಲ್ಲಿ ಕಡೆಯ ಸ್ಥಾನದಲ್ಲಿದ್ದ ಕಡೂರು ಶೈಕ್ಷಣಿಕ ವಲಯ ಈ ಬಾರಿ ಉನ್ನತ ಸ್ಥಾನಕ್ಕೇರಬೇಕೆಂಬ ಆಶಯ ಇಲಾಖೆಯದ್ದು ಹಾಗೂ ಶಿಕ್ಷಕರದ್ದಾಗಿದೆ ಎಂದರು
.ಡಯಟ್ ಉಪನ್ಯಾಸಕ ಶಿವಕುಮಾರ್ ಮತ್ತು ಆರ್.ಸಿದ್ದರಾಜು ನಾಯ್ಕ ನೋಡಲ್ ಅಧಿಕಾರಿಗಳಾಗಿ ಕಾರ್ಯಾಗಾರದ ಮೇಲ್ವಿಚಾರಣೆ ನಡೆಸಿದರು. ವಿಷಯವಾರು ಸಂಪನ್ಮೂಲ ವ್ಯಕ್ತಿಗಳಾದ ನಾಗರಾಜು, ಅಶೋಕ್, ಶಿವರಾಜು- ಕಿರಣ್, ಚೇತನ್ ರಾಜಪ್ಪ, ಕಾಂತರಾಜು- ಸತೀಶ್, ಕಿರಣ್ ಕುಮಾರ್- ಯಶ್ವಂತ್, ಪ್ರಕಾಶ್- ರಮೇಶ್,ಬಿ.ಆರ್.ಸಿ.ಪ್ರೇಂ ಕುಮಾರ್ ಭಾಗವಹಿಸಿದ್ದರು.
