ಕಡೂರು: ಭೂ ಗ್ಯಾರಂಟಿ ಯೋಜನೆಯ ಅನುಷ್ಠಾನದಲ್ಲಿ ಕಡೂರು ತಾಲ್ಲೂಕು ಮಂಚೂಣಿಯಲ್ಲಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ತಾಲ್ಲೂಕಿನ ಸೀಗೇಹಡ್ಲು ಗ್ರಾಮದಲ್ಲಿ 129 ಜನರಿಗೆ ಭೂ ಗ್ಯಾರಂಟಿ ಯೋಜನೆಯಡಿ ಮನೆಗಳ ಹಕ್ಕುಪತ್ರ, ಇಸ್ವತ್ತು ದಾಖಲೆ ವಿತರಿಸಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿರುವ 131 ಗ್ರಾಮಗಳನ್ನು ಕಂದಾಯಗ್ರಾಮವನ್ನಾಗಿ ಪರಿವರ್ತಿಸಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆ ಪೈಕಿ 61 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲಾಗಿದ್ದು, 71 ಗ್ರಾಮಗಳೂ ಶೀಘ್ರವೇ ಕಂದಾಯ ಗ್ರಾಮಗಳಾಗುವ ನಿರೀಕ್ಷೆಯಿದೆ.
ಭೂಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ಕಡೂರು ರಾಜ್ಯದಲ್ಲೆ ಪ್ರಥಮ ಸ್ಥಾನದಲ್ಲಿದೆ ಎಂದರು.
ತಾಲ್ಲೂಕಿನ ಕಂದಾಯ ಗ್ರಾಮವಲ್ಲದ ಗ್ರಾಮಗಳಲ್ಲಿ ಮನೆಗಳನ್ನು ಹೊಂದಿರುವ ಹಲವಾರು ಜನರಿಗೆ ಮನೆಯ ಹಕ್ಕುಪತ್ರವೇ ಇರಲಿಲ್ಲ. ಮನೆಯ ಇ ಸ್ವತ್ತು ಇಲ್ಲದೆ ಹಲವು ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗದೆ ತೊಂದರೆಗೊಳಗಾಗಿದ್ದರು.ಇದನ್ನು ಮನಗಂಡು ತಾಲ್ಲೂಕಿನಲ್ಲಿ ಸಮೀಕ್ಷೆ ಮೂಲಕ ಸುಮಾರು 14 ಸಾವಿರ ಪ್ರಕರಣಗಳನ್ನು ಗುರುತಿಸಲಾಯಿತು. ಅವರೆಲ್ಲರಿಗೂ ಇ ಸ್ವತ್ತು,ಹಕ್ಕುಪತ್ರ ದೊರಕಿಸಿಕೊಡುವ ಕಾರ್ಯ ಪ್ರಗತಿಯಲ್ಲಿದ್ದು,ಹಂತ ಹಂತವಾಗಿ ಇ ಸ್ವತ್ತು,ಹಕ್ಕು ಪತ್ರ ನೀಡಿವ ನಿಟ್ಟಿನಲ್ಲಿ ಇಂದು ಬಂಟಗನಹಳ್ಳಿ ಗ್ರಾಮದ 129 ಜನರಿಗೆ ಹಕ್ಕುಪತ್ರ ನೀಡಲಾಗಿದೆ.ಇದರಿಂದ ಅವರು ಹಲವಾರು ಸೌಲಭ್ಯಗಳನ್ನು ಪಡೆಯಬಹುದಾಗಿದೆ ಎಂದರು.
ಪ್ರಾಸ್ತಾವಿಕವಾಗಿ ತಹಶೀಲ್ದಾರ್ ಸಿ.ಎಸ್.ಪೂರ್ಣಿಮಾ ಮಾತನಾಡಿ, ದಾಖಲೆ ರಹಿತ ವಸತಿ ಪ್ರದೇಶಗಳ ನಿವಾಸಿಗಳಿಗೂ ಹಕ್ಕುಪತ್ರ ನೀಡಬೇಕೆಂಬ ಸರ್ಕಾರದ ಮಾರ್ಗಸೂಚಿಯಂತೆ ಕ್ರಮ ವಹಿಸಲಾಗಿದೆ. 40 ಮನೆಗಳಿದ್ದು 250 ಜನ ವಾಸವಿದ್ದರೆ ಆ ಜನವಸತಿ ಪ್ರದೇಶವನ್ನು ಕಂದಾಯ ಗ್ರಾಮದ ಮಾನ್ಯತೆ ನೀಡಲಾಗುತ್ತದೆ. ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ, ಇ-ಸ್ವತ್ತು ಮತ್ತು ನೋಂದಣಿ ಪತ್ರ ನೀಡಲಾಗುವುದು ಎಂದರು.
ತಹಶೀಲ್ದಾರ್ ಪೂರ್ಣಿಮಾ, ತಾಲ್ಲೂಕು ಪಂಚಾಯಿತಿ ಇಓ ಸಿ.ಆರ್.ಪ್ರವೀಣ್, ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಕಾಮನಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೇಖರ್ , ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸೀಗೇಹಡ್ಲು ಹರೀಶ್, ಮಲಿಯಪ್ಪ ಇದ್ದರು.
.
