
ಕಡೂರು : ಗ್ರಾಮಪಂಚಾಯ್ತಿಗಳಲ್ಲಿ ಅಭಿವೃದ್ಧಿ ಕಾರ್ಯಗಳ ಪ್ರಮುಖ ಪಾತ್ರ ನರೇಗಾ ಯೋಜನೆಯದು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ತಾಲ್ಲೂಕಿನ ಪುರ ಗ್ರಾಮ ಪಂಚಾಯಿತಿಯ ನೂತನ ಕಟ್ಟಡ, ದೊಣ್ಣೆಕೋರನಹಳ್ಳಿ ಗ್ರಾಮದ ಜುಂಜಪ್ಪಸ್ವಾಮಿ ದೇವಾಲಯದ ಬಳಿ ಊಟದ ಭವನ ಹಾಗೂ ಕಲ್ಯಾಣಿಯ ಉದ್ಘಾಟನೆ ಮತ್ತು ಸಿಸಿ ರಸ್ತೆ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನರವೇರಿಸಿ ಅವರು ಮಾತನಾಡಿದರು.
ಅಧಿಕಾರ ವಿಕೇಂದ್ರೀಕರಣದ ಆಶಯದಲ್ಲಿ ಜಿಲ್ಲಾ,ತಾಲ್ಲೂಕು ಮತ್ತು ಗ್ರಾಮಪಂಚಾಯಿತಿ ವ್ಯವಸ್ಥೆ ಜಾರಿಗೆ ತಂದ ರಾಜೀವ್ ಗಾಂಧಿಯವರು ಪಂಚಾಯಿತಿಗಳಲ್ಲಿ ಮಹಿಳೆಯರಿಗೆ ಶೇ 33 ಮೀಸಲಾತಿ ಕಲ್ಪಿಸಿದರು. ಮನಮೋಹನ್ ಸಿಂಗ್ ಅವರು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ರೂಪಿಸಿ ಜಾರಿಗೆ ತಂದರು. ಈ ನರೇಗಾ ಯೋಜನೆಯಡಿ ಗ್ರಾಮಪಂಚಾಯಿತಿಗಳು ಮಾಡುವ ಅಭಿವೃದ್ಧಿ ಕಾರ್ಯಗಳಿಗೆ ನೇರವಾಗಿ ಹಣ ಬಿಡುಗಡೆಯಾಗುತ್ತಿರುವುದರಿಂದ ಗ್ರಾಮೀಣ ಭಾಗಗಳಲ್ಲಿ ಬಹಳಷ್ಟು ಅಭಿವೃದ್ಧಿಯಾಗುತ್ತಿದೆ.ರಾಜ್ಯ ಸರ್ಕಾರ ಪ್ರತಿ ಗ್ರಾಮಪಂಚಾಯಿತಿ ಕಟ್ಟಡಕ್ಕೆ ₹20 ಲಕ್ಷ ಅನುದಾನ ನೀಡುತ್ತಿದೆ ಎಂದರು.
ಶಿಕ್ಷಣ ಕ್ಷೇತ್ರಕ್ಕೆ ಮಂಜೂರಾಗಿದ್ದ 142 ಕೋಟಿ ಅನುದಾನದಲ್ಲಿ ಈಗಾಗಲೇ ಚೌಳಹಿರಿಯೂರು, ಯಗಟಿ, ಪಂಚನಹಳ್ಳಿಯಲ್ಲಿ ವಿದ್ಯಾರ್ಥಿಗಳ ವಸತಿ ನಿಲಯಗಳು, ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆಗಳು, ಚಿಕ್ಕಬಳ್ಳೇಕೆರೆ ವಸತಿ ನಿಲಯ, ಬೀರೂರು ಅಲೆಮಾರಿ ವಸತಿ ಶಾಲೆಗಳಿಗೆ ಅನುದಾನ ಒದಗಿಸಲಾಗಿದೆ. ಅಂತರಘಟ್ಟೆ, ಯಗಟಿ ಭಾಗಗಳಲ್ಲಿ ನೂರಾರು ಕೋಟಿ ವೆಚ್ಚದಲ್ಲಿ ಹನಿ ನೀರಾವರಿ ಕೆಲಸಗಳು ಅನುಷ್ಠಾನಗೊಳ್ಳುತ್ತಿವೆ. ತಾಲ್ಲೂಕಿನಲ್ಲಿ ಒಂದು ಕಾರ್ಮಿಕಶಾಲೆ ಸ್ಥಾಪನೆಯಾಗಲಿದೆ. ಕಡೂರನ್ನು ಮಾದರಿ ಕ್ಷೇತ್ರವಾಗಿಸುವ ಕನಸಿಗೆ ರಾಜ್ಯ ಸರ್ಕಾರ ಸದಾ ಸ್ಪಂದಿಸುತ್ತಿದೆ ಎಂದರು.
ತಾಲ್ಲೂಕು ಪಂಚಾಯಿತಿ ಇಓ ಸಿ.ಆರ್. ಪ್ರವೀಣ್
ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ದೊಣ್ಣೆಕೋರನಹಳ್ಳಿ ಉಮೇಶ್,
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ, ಗ್ರಾಮಪಂಚಾಯಿತಿ ಅಧ್ಯಕ್ಷೆ ಸುಮಾಮಹೇಶ್, ಉಪಾಧ್ಯಕ್ಷ ಅಶೋಕ್, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಟಿ.ಕಲ್ಲೇಶ್, ತಾ.ಪಂ. ಮಾಜಿ ಅಧ್ಯಕ್ಷ ಕೋಡಿಹಳ್ಳಿ ಮಹೇಶ್ವರಪ್ಪ, ಗ್ರಾ.ಪಂ. ಸದಸ್ಯರಾದ ರೇಣುಕಾ ಉಮೇಶ್, ಡಿ.ಟಿ.ಕುಮಾರ್, ಎಚ್.ಬಿ.ಈಶ್ವರಪ್ಪ, ಶಕುಂತಲಾ ರವಿ, ನಾಗಮ್ಮ ಶಿವಕುಮಾರ್, ಪುಷ್ಪಲತಾ ಮಹೇಶ್, ಕೆ.ಎಂ.ಮಂಜಪ್ಪ, ಪಿ.ವಿ.ಮನುಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಿರಣ್ಕುಮಾರ್, ಕಾರ್ಯದರ್ಶಿ ಮೀನಾಕ್ಷಿ ಇದ್ದರು.

ದೊಣ್ಣೆ ಕೋರನಹಳ್ಳಿಯಲ್ಲಿ ನವೀಕೃತ ಕಲ್ಯಾಣಿಗೆ ಪೂಜೆ ಸಲ್ಲಿಸಿದ ಶಾಸಕ ಕೆ.ಎಸ್.ಆನಂದ್

