ಕಡೂರು: ಐಎನ್.ಐ ಪರೀಕ್ಷೆಯಲ್ಲಿ ದೇಶಕ್ಕೆ ಎರಡನೇ ಸ್ಥಾನ ಗಳಿಸಿದ ಡಾ.ವರುಣ್ ಅವರನ್ನು ಕಡೂರು ವಕೀಲರ ಸಂಘ ಮಂಗಳವಾರ ಆತ್ಮೀಯವಾಗಿ ಗೌರವಿಸಿತು.
ಈ ಸಂದರ್ಭದಲ್ಲಿ ಅಭಿನಂದನಾ ಭಾಷಣ ಮಾಡಿದ ಹಿರಿಯ ವಕೀಲ ಕೆ.ಜಿ.ಅಣ್ಣಪ್ಪ ಮಾತನಾಡಿ, ಪ್ರತಿಭಾನ್ವಿತರು ಶೈಕ್ಷಣಿಕವಾಗಿ ಎತ್ತರದ ಸಾಧನೆ ಮಾಡುತ್ತಾರೆ. ಆದರೆ ಆ ಸಾಧನೆಯ ಫಲ ಯಾರಿಗೆ ದೊರೆಯುತ್ತದೆ? ನಮ್ಮ ದೇಶಕ್ಕೋ ಅಥವಾ ವಿದೇಶಕ್ಕೋ ಎಂಬುದು ದೊಡ್ಡ ಪ್ರಶ್ನೆ. ಆ ಪ್ರಶ್ನೆಗೆ ಉತ್ತರವನ್ನು ಸಾಧನೆ ಮಾಡಿದವರೇ ನೀಡಬೇಕು. ಏಮ್ಸ್ ನಂತಹ ಸಂಸ್ಥೆಗಳಲ್ಲಿ ಓದಲು ಅವಕಾಶ ದೊರೆಯುವುದು ಸುಲಭವಲ್ಲ. ಅದಕ್ಕೆ ಅತ್ಯಂತ ಕಠಿಣ ಪರಿಶ್ರಮ ಬಹುಮುಖ್ಯ. ಅದನ್ನು ಸಾಧಿಸಿದ ವರುಣ್ ಅಭಿನಂದನೀಯರು ಎಂದರು.
ಗೌರವ ಸ್ವೀಕರಿಸಿದ ಡಾ.ವರುಣ್ ಮಾತನಾಡಿ,ಆರೋಗ್ಯಪೂರ್ಣ ಸಮಾಜಕ್ಕೆ ವೈದ್ಯರು ಪ್ರಮುಖ ಜವಾಬ್ದಾರರು. ಎಂ.ಬಿ.ಬಿ.ಎಸ್.ಪದವಿ ಪಡೆದ ನಂತರ ಕಾನೂನು ಅಥವಾ ಆಡಳಿತ ವ್ಯಾಸಂಗ ಮಾಡಲು ನಿರ್ಧರಿಸಿದ್ದೆ. ಆದರೆ ಆ ಸಂದರ್ಭದಲ್ಲಿ ಚಿಕಿತ್ಸೆ ನೀಡಿದ ವೃದ್ಧರೊಬ್ಬರು ಕೈ ಮುಗಿದಾಗ ವೈದ್ಯರ ಸ್ಥಾನ ಏನೆಂಬುದು ಅರ್ಥವಾಯಿತು. ಆಗಲೇ ಇದೇ ರಂಗದಲ್ಲಿ ಮುಂದುವರೆಯುವ ನಿಶ್ಚಯ ಮಾಡಿದೆ. ಭಾರತದಲ್ಲೆ ವೈದ್ಯಕೀಯ ಸೇವೆ ಮಾಡುವುದು ನನ್ನ ಆಶಯವಾಗಿದೆ. ವಕೀಲರ ಸಂಘ ಇಂದು ನೀಡಿದ ಗೌರವ ವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಗೌರವ ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಇರ್ಫಾನ್, ವಕೀಲರಾದ ಬಿ.ಶಿವಕುಮಾರ್, ಕೆ.ಎನ್.ಬೊಮ್ಮಣ್ಣ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಟಿ.ಗೋವಿಂದಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಎಚ್. ಸವಿತಾರಾಣಿ , ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ತಹಾ ಖಲೀಲ್, ವಕೀಲರಾದ ಕೆ.ಎನ್.ರಾಜಣ್ಣ, ಎಂ.ಎಸ್.ಹೆಳವರ,ವಕೀಲರ ಸಂಘದ ಪದಾಧಿಕಾರಿಗಳು ಇದ್ದರು.

