
ಕಡೂರು: ವಿದ್ಯೆಗೆ ಓಂಕಾರ ಹಾಕಿದ ಶಾಲೆಯ ಋಣ ತೀರಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಮುಖಂಡ ಕಂಸಾಗರ ಸೋಮಶೇಖರ್ ಹೇಳಿದರು.
ತಾಲ್ಲೂಕಿನ ಕಂಸಾಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ನೂತನ ಅಧ್ಯಕ್ಷೆ ಕುಮಾರಿ ಕೃಷ್ಣಮೂರ್ತಿ ಹಾಗೂ ಉಪಾಧ್ಯಕ್ಷ ಬಸವರಾಜಪ್ಪ ಅವರನ್ನು ಗುರುವಾರ ಗೌರವಿಸಿ ಅವರು ಮಾತನಾಡಿದರು.
ನಾನು ಓದಲು ಆರಂಭಿಸಿದ ಈ ಶಾಲೆಯ ಅಭಿವೃದ್ಧಿಯಲ್ಲಿ ಸದಾ ಕೈಜೋಡಿಸುತ್ತಿದ್ದೇನೆ. ಗ್ರಾಮಪಂಚಾಯಿತಿ ಅಧ್ಯಕ್ಷರಿಗೆ ಮತ್ತು ಸದಸ್ಯರಿಗಾಗಿ ಸಿಗುವ ಗೌರವಧನವನ್ನು ವೈಯುಕ್ತಿಕವಾಗಿ ಬಳಸದೆ ಈ ಶಾಲೆಯಲ್ಲಿ ಓದುವ ಮೂವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲು ಹಾಗೂ ಶಾಲೆಗೆ ಮೂಲಸೌಕರ್ಯ ಕಲ್ಪಿಸಲು ಬಳಸಿದ್ದೇನೆ. ಶಾಲೆಗೆ ಅಗತ್ಯವಾದ ಪರಿಕರಗಳನ್ನು ನೀಡಿದ್ದು, ಮುಂದೆಯೂ ಶಾಲಾಭಿವೃದ್ಧಿಯಲ್ಲಿ ಸಹಕಾರ ನೀಡುತ್ತೇನೆ. ಈ ಶಾಲೆಯ ಜೊತೆ ನನ್ನ ಸಂಬಂಧ ಭಾವನಾತ್ಮಕವಾದದ್ದು.ಇಲ್ಲಿ ಓದಿ ಮುಂದೆ ಉನ್ನತ ಸ್ಥಾನ ಪಡೆದ ವಿದ್ಯಾರ್ಥಿಗಳು ಈ ಶಾಲೆಯ ಬಗ್ಗೆ ಸದಾ ಅಭಿಮಾನವಿಟ್ಟುಕೊಂಡು ಇದರ ಅಭಿವೃದ್ಧಿಯಲ್ಲಿ ಶ್ರಮಿಸಬೇಕು ಎಂದರು.
ಕಂಸಾಗರದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದ್ದು ಕೆಲವರು ನ್ಯಾಯಾಲಯದ ಮೊರೆಹೋಗಿದ್ದಾರೆ. ಅಡೆತಡೆಗಳ ನಿವಾರಣೆಯಾಗಿ ಶೀಘ್ರವೇ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಚಾಲನೆ ದೊರೆಯಲಿದೆ. ಗ್ರಾಮಪಂಚಾಯಿತಿ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಕಂಸಾಗರ ರೈಲ್ವೆ ಬ್ರಿಡ್ಜ್ ಮೇಲೆ ವಿದ್ಯುದ್ದೀಪಗಳನ್ನು ಅಳವಡಿಸುವ ಕಾರ್ಯದಲ್ಲಿ ಶ್ರಮಿಸಿದ್ದು ಇದೀಗ ಸಾಕಾರಗೊಂಡಿದೆ. ಶೀಘ್ರದಲ್ಲೆ ಅದನ್ನು ಉದ್ಘಾಟಿಸಲಾಗುತ್ತದೆ ಎಂದರು.
ಶಾಲಾಭಿವೃದ್ಧಿ ಸಮಿತಿ ನಿಕಟಪೂರ್ವ ಅಧ್ಯಕ್ಷ ನಾಗೇಂದ್ರ,ನಿಕಟ ಪೂರ್ವ ಉಪಾಧ್ಯಕ್ಷೆ ನಳಿನಾಕ್ಷಿ, ಮುಖ್ಯೋಪಾಧ್ಯಾಯ ಮಂಜಪ್ಪ,ಸದಸ್ಯರಾದ ಮಂಜುಳಾ ಪುಟ್ಟಸ್ವಾಮಿ,ಪರಮೇಶ್,ಮಾಲ, ಸುಮಾ,ಪವಿತ್ರ, ಪೋಷಕರು ಇದ್ದರು.

