ಕಡೂರು: ಜಾತಿ ಮತಗಳ ಬೇಧವಿಲ್ಲದೆ ಭಕ್ತಿಮಾರ್ಗದ ಮುಲಕ ದೈವವನ್ನು ಮೂರ್ತರೂಪದಲ್ಲಿ ಪೂಜಿಸಲು ತಾಣವೊಂದನ್ನು ರೂಪಿಸುವ ಕಲ್ಪನೆ ಆಚಾರ್ಯ ರಾಮಾನುಜದ್ದಾಗಿತ್ತು. ಆ ಕಲ್ಪನೆಯೇ ಅಸಂಖ್ಯಾತ ದೇವಸ್ಥಾನಗಳ ಉಗಮಕ್ಕೆ ನಾಂದಿಯಾಯಿತು ಎಂದು ಮೇಲುಕೋಟೆ ಯತಿರಾಜ ಮಠದ ಯದುಗಿರಿ ಯತಿರಾಜ ರಾಮಾನುಜ ನಾರಾಯಣ ಜೀಯರ್ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಮಚ್ಚೇರಿ ಯ ಸೌಮ್ಯ ಯೋಗಾನರಸಿಂಹ ದೇವಸ್ಥಾನದ ಮೂರನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.
ಭಗವಂತನ ಲೀಲೆಗಳನ್ನು ವರ್ಣಿಸಲು ಅಸಾಧ್ಯ. ತೀರ ಶಿಥಿಲವಾಗಿದ್ದ ದೇವಸ್ಥಾನ ಮತ್ತೆ ಭವ್ಯವಾಗಿ ಪುನರ್ನಿರ್ಮಾಣಗೊಂಡು ಗತವೈಭವ ಮರುಕಳಿಸಿದ್ದು ಭಗವಂತನ ಕೃಪೆ. ದೇವಸ್ಥಾನಗಳು ನಮ್ಮ ಮನಸ್ಸನ್ನು ಪರಿವರ್ತಿಸಿ ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುವ ತಾಣಗಳಾಗಬೇಕು.ವಿಶೇಷವಾಗಿ ದೇವಸ್ಥಾನದ ಪುನರ್ನಿರ್ಮಾಣದಲ್ಲಿ ಶ್ರಮಿಸಿದ ಯತಿರಾಜ ಮತ್ತು ಯೋಗಾನರಸಿಂಹ ಹಾಗೂ ಅವರ ಕುಟುಂಬವರ್ಗ ಅವರು ಅಭಿನಂದನೀಯರು. ಎಲ್ಲರಿಗೂ ನೆಮ್ಮದಿ ದೊರೆಯಲಿ, ರೈತರ ಬಾಳು ಹಸನಾಗಲಿ ಎಂದು ಹಾರೈಸಿದರು.
ವಾರ್ಷಿಕೋತ್ಸವದ ಪ್ರಯುಕ್ತ ಶಾಂತಿಹೋಮ ನಡೆಸಲಾಯಿತು. ಅಭಿಷೇಕ,ಶಾತ್ತುಮೊರೈ ಸೇವೆ ನೆರವೇರಿತು. ಮೇಲುಕೋಟೆ ಪುರೋಹಿತ ನಂಬಿ ಭಟ್ಟರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ದೇವಸ್ಥಾನದ ಧರ್ಮದರ್ಶಿ ಸಮಿತಿ ಅಧ್ಯಕ್ಷ ಎಂ.ಕೆ.ತಿಮ್ಮಯ್ಯ ಹಾಗೂ ಸದಸ್ಯರು ಇದ್ದರು.

