ಕಡೂರು: ಬರಗಾಲದಿಂದ ಬಳಲಿರುವ ತಾಲ್ಲೂಕು ನೀರಾವರಿಯಿಂದ ಸಮೃದ್ಧವಾಗಬೇಕೆಂಬ ಆಶಯ ನಮ್ಮದಾಗಿದೆ ಎಂದು ಶಾಸಕ ಕೆ.ಎಸ್. ಆನಂದ್ ತಿಳಿಸಿದರು.
ತಾಲ್ಲೂಕಿನ ಬಿಸಿಲೆರೆ ಗ್ರಾಮದ ಹೊರವಲಯದಲ್ಲಿರುವ ಬರಹಳ್ಳಕ್ಕೆ ಸಣ್ಣ ನೀರಾವರಿ ಇಲಾಖೆಯಿಂದ ಅಟಲ್ ಭೂ ಜಲ ಯೋಜನೆಯಡಿ 1 ಕೋಟಿ ವೆಚ್ಚದ ಚೆಕ್ಡ್ಯಾಂ ನಿರ್ಮಾಣ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ನಾನು ಶಾಸಕನಾದ ನಂತರ ತಾಲ್ಲೂಕಿನ ಅಂತರ್ಜಲ ಮಟ್ಟ ಏರಿಕೆಯಾಗಬೇಕೆಂಬ ನಿಟ್ಟಿನಲ್ಲಿ 16 ಚೆಕ್ ಡ್ಯಾಂ ನಿರ್ಮಾಣ ಮಾಡಲಾಗಿದೆ. 50 ಕೋಟಿ ವೆಚ್ಚದಲ್ಲಿ ಮಧಗದ ಕೆರೆ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಭಧ್ರಾ ಉಪಕಣಿವೆ ಯೋಜನೆಯಡಿ ಎರಡನೇ ಹಙತದ ಕಾಮಗಾರಿಗೆ 400 ಕೋಟಿ ಮಂಜೂರಾಗಿದೆ. ಮೂರನೇ ಹಂತದ ಯೋಜನೆಗೆ ಟೆಂಡರ್ ಪ್ರಕ್ರಿಯೆ ನಡೆದಿದ್ದು 407 ಕೋಟಿ ಮಂಜುರಾಗಿದೆ ಎಂದರು.
ಈ ಚೆಕ್ಡ್ಯಾಂ ನಿರ್ಮಾಣ ಹಂತದಲ್ಲಿ ಜಮೀನುಗಳಿಗೆ ತೆರಳಲು ಅಡ್ಡಿಯಾಗದಂತೆ ಬೊಮ್ಮಪ್ಪನ ಕಟ್ಟೆ ಬಳಿ ಸೇತುವೆ ನಿಮರ್ನಿಸಿಕೊಡಬೇಕು ಎನ್ನುವುದು ಗ್ರಾಮಸ್ಥರ ಬೇಡಿಕೆಯಾಗಿದೆ. ಅದಕ್ಕಾಗಿ ಆರ್ಡಿಪಿಆರ್ ವತಿಯಿಂದ ರೂ.40ಲಕ್ಷ ಹಣ ನೀಡಲಾಗಿದೆ.ಈ ಚೆಕ್ಡ್ಯಾಂನಿಂದ ನೀರು ನಿಂತು ರೈತರಿಗೆ ಸಮಸ್ಯೆ ಆಗುವುದಾದರೆ ಅಲ್ಲಿಯೂ ಒಂದು ಸೇತುವೆ ನಿರ್ಮಿಸುವ ಅವಕಾಶವಿದೆ ಎಂದರು.
ಸಣ್ಣ ನೀರಾವರಿ ಇಲಾಖೆ ಎಇಇ ದಕ್ಷಿಣಾಮೂರ್ತಿ ಮಾತನಾಡಿ ಈ ಚೆಕ್ಡ್ಯಾಂ 25ರಿಂದ 28ಮೀಟರ್ ಅಗಲ, 3 ಮೀಟರ್ ಆಳ ಮತ್ತು ಸುಮಾರು 650 ಮೀಟರ್ ಉದ್ದಕ್ಕೆ ನೀರು ನಿಲ್ಲುವ ಅವಕಾಶವಿದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಮ್ಮ, ಉಪಾಧ್ಯಕ್ಷ ವಸಂತ ಕುಮಾರ್,ಸದಸ್ಯರಾದ ಸವಿತಾ, ಪ್ರಭುಕುಮಾರ, ರಾಜಪ್ಪ, ಗುರುಮೂರ್ತಿ ಇದ್ದರು.

