ಕಡೂರು: ಕ್ಷೇತ್ರದ ಪ್ರತಿ ಗ್ರಾಮದಲ್ಲೂ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಪಟ್ಟಣಗೆರೆ ಗ್ರಾಮದ ಅಂಬೇಡ್ಕರ್ ನಗರದ ಆಯ್ದ ಭಾಗಗಲ್ಲಿ 30 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ಇಲ್ಲಿನ ಕಟ್ಟೆಹೊಳೆಯಮ್ಮ ದೇವಸ್ಥಾನಕ್ಕೆ 50 ಲಕ್ಷ ಅನುದಾನ ಒದಗಿಸಲಾಗಿದೆ. ಮತ್ತಷ್ಟು ಕಾರ್ಯಗಳು ಪೂರ್ಣಗೊಳ್ಳಬೇಕಿದ್ದು ಅದರತ್ತ ಗಮನ ಹರಿಸಿ ಈ ಗ್ರಾಮದ ಅಭಿವೃದ್ಧಿಗೆ ಆಧ್ಯತೆ ನೀಡುತ್ತೇನೆ. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯ ಕುಂಠಿತವಾಗಿದೆ ಎಂಬುದಕ್ಕೆ ಸರ್ಕಾರದ ಗ್ಯಾರಂಟಿ ಯೋಜನೆಗಳ ಜೊತೆ ಇಂತಹ ಅಭಿವೃದ್ಧಿ ಕಾರ್ಯಗಳೇ ಉತ್ತರ ನೀಡುತ್ತವೆ. ಸರ್ಕಾರ ಯಾವಾಗಲೂ ಬಡವರ ಪರವಾಗಿರುತ್ತದೆ. ಶಾಸಕನಾಗಿ ಕ್ಷೇತ್ರದ ಪ್ರತಿ ಗ್ರಾಮಕ್ಕೂ ಅಗತ್ಯ ಅನುದಾನ ಒದಗಿಸುವಲ್ಲಿ ಶ್ರಮಿಸುತ್ತಿದ್ದೇನೆ. ಈಗಾಗಲೇ ಕ್ಷೇತ್ರದ ನಿರುದ್ಯೋಗ ಸಮಸ್ಯೆ ಗಣನೀಯ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಗಾರ್ಮೆಂಟ್ಸ್ ಪ್ಯಾಕ್ಟರಿ ಕೆಲವೇ ದಿನಗಳಲ್ಲಿ ಆರಂಭವಾಗಲಿದ್ದು, ಸುಮಾರು ಐದು ಸಾವಿರ ಮಹಿಳೆಯರಿಗೆ ಉದ್ಯೋಗ ದೊರೆಯಲಿದೆ. ಕ್ಷೇತ್ರದ ಅಭಿವೃದ್ಧಿಯಲ್ಲಿ ನನ್ನ ಶ್ರಮ ನಿರಂತರ ಎಂದರು.
ಮುಖಂಡ ಕುರುಬಗೆರೆ ಲೋಕೇಶ್ ಮಾತನಾಡಿ, ಗ್ರಾಮದ ಹತ್ತಿರದಲ್ಲೆ ಸುಮಾರು ನಾಲ್ಕು ಐದು ಎಕರೆ ಜಮೀನು ಇದ್ದು, ಅಲ್ಲಿ ಪೂರ್ಣ ಮುಳ್ಳುಗಿಡಗಳು ಬೆಳೆದಿದ್ದು, ಅಲ್ಲಿ ಶವಸಂಸ್ಕಾರ ನಡೆಸಲು ತೊಂದರೆಯಾಗಿದೆ. ಅಲ್ಲಿ ಮೂಲಸೌಕರ್ಯ ಕಲ್ಪಿಸಬೇಕಿದೆ ಎಂದು ಗ್ರಾಮಕ್ಕೆ ವಿವಿಧ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡಲು ಮನವಿ ಮಾಡಿದರು.
ಗ್ರಾಮಪಂಚಾಯಿತಿ ಅಧ್ಯಕ್ಷೆ ಶಾಲಿನಿ,ಉಪಾಧ್ಯಕ್ಷೆ ನಾಗರತ್ನ, ಮುಖಂಡರಾದ ಶ್ರೀರಾಂಪುರ ರಾಕೇಶ್, ದಾಸಯ್ಯನಗುತ್ತಿ ಚಂದ್ರಪ್ಪ, ಚಿಕ್ಕಂಗಳ ಪ್ರಕಾಶನಾಯ್ಕ, ಎಸ್.ಬಿ.ಹನುಮಂತಪ್ಪ ಮತ್ತು ಗ್ರಾಮಸ್ಥರು ಇದ್ದರು.
