ಚಿಕ್ಕಮಗಳೂರು: ಮೂಡಿಗೆರೆ ತಾಲ್ಲೂಕಿನ ಚಾರ್ಮಾಡಿ ಘಾಟ್ ಮಳೆಗಾಲದಲ್ಲಿ ರುದ್ರ ರಮಣೀಯವಾಗಿ ಬದಲಾಗುತ್ತದೆ. ಮಂಜು ಮುಸುಕಿದ ದಾರಿಯಲ್ಲಿ ಒಂದೆಡೆ ಪ್ರಪಾತ..ಮತ್ತೊಂದೆಡೆ ಎತ್ತರದ ಬೆಟ್ಟಗಳು……ಬಂಡೆಗಳ ನಡುವೆ ಹತ್ತಾರು ಜಲಪಾತಗಳು….. ಪ್ರಕೃತಿಯ ಸೌಂದರ್ಯ ನೋಡಲು ಎರಡು ಕಣ್ಣು ಸಾಲದು…
ಆದರೆ ಈ ಸೌಂದರ್ಯವನ್ನು ಆಸ್ವಾದಿಸುವುದೆಷ್ಟು ಅಪ್ಯಾಯಮಾನವೋ ಅಷ್ಟೇ ಅಪಾಯಕಾರಿ. ಚಾರ್ಮಾಡಿಯ ದುರ್ಗಮ ರಸ್ತೆಗಳಲ್ಲಿ ಹಲವಾರು ಜಲಪಾತಗಳು ಜೀವಕಳೆ ಪಡೆದಿವೆ. ಇಲ್ಲಿ ಸಾಗುವ ಪ್ರವಾಸಿಗರು ಜಲಪಾತದ ಸೌಂದರ್ಯವನ್ನು ಕಣ್ತುಂಬಿಕೊಂಡರೆ ತೊಂದರೆಯಿಲ್ಲ. ಆದರೆ ಆ ಜಲಪಾತಗಳ ಸನಿಹಕ್ಕೆ ತೆರಳುವುದು…ನೀರಿನ ಜೊತೆ ಜಾರುತ್ತಾ ಬರುವುದು….ಪ್ರಪಾತವಿರುವೆಡೆ ಸೆಲ್ಫಿ ತೆಗೆಯಲು ವಿಚಿತ್ರ ಹಾವ ಭಾವ ತೋರುವುದು….ಇವೆಲ್ಲವೂ ಅತ್ಯಂತ ಅಪಾಯಕಾರಿ ಎಂಬುದು ಪ್ರವಾಸಿಗರಿಗೆ ತಿಳಿಯದ್ದೇನಲ್ಲ. ಆದರೂ ಹುಚ್ಚಾಟಕ್ಕೆ ಅಡೆ ತಡೆಯೇ ಇಲ್ಲದಂತಾಗಿದೆ.
ಪೊಲೀಸರು ಗಸ್ತು ತಿರುಗುತ್ತಿದ್ದರೂ ಅವರ ಕಣ್ತಪ್ಪಿಸಿ ಮೋಜು ಮಸ್ತಿ ಮಾಡುವವರ ಹುಚ್ಚಾಟ ಹೆಚ್ಚಾಗಿದೆ. ಜಾರುವ ಬಂಡೆಗಳ ಮೇಲೆ ಜಾರುತ್ತಲೇ ಬರುವ ಯುವಕ ಯುವತಿಯರು ಅಪಾಯದೊಡನೇ ಚೆಲ್ಲಾಟವಾಡುತ್ತಿದ್ದಾರೆ. ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.
ಒಂದೆಡೆ ಜಲಪಾತಗಳಿಗೆ ಜೀವಕಳೆ…ಮತ್ತೊಂದೆಡೆ ಪ್ರವಾಸಿಗರ ಹುಚ್ಚಾಟ…….ಹಲವಾರು ಜನರು ಬಿದ್ದು ಕೈ ಕಾಲು ಮುರಿದುಕೊಂಡಿದ್ದಾರೆ.ಅದರೂ ಇನ್ನೂ ಬುದ್ದಿ ಬಂದಿಲ್ಲ…
ಪೊಲೀಸರಿಗೆ ಇದು ತಲೆನೋವಾಗಿ ಪರಿಣಮಿಸಿದೆ… ಪ್ರವಾಸಿಗರೇ ಸ್ವಪ್ರೇರಣೆಯಿಂದ ಹುಚ್ಚಾಟಗಳಿಗೆ ಸ್ವಯಂ ಕಡಿವಾಣ ಹಾಕಿಕೊಳ್ಳುವುದು ಒಳಿತು.
