ಕಡೂರು: ವಿಮರ್ಶೆಗಳಿಂದಲೇ ಕವಿಗಳು ರೂಪುಗೊಂಡಿದ್ದು ಎಂಬುದು ವಾಸ್ತವಿಕ ಸತ್ಯ ಎಂದು ಕವಿ ಬಿ.ಆರ್.ಲಕ್ಷ್ಮಣರಾವ್ ಪ್ರತಿಪಾದಿಸಿದರು.
ಕಡೂರಿನಲ್ಲಿ ನಡೆಯುತ್ತಿರುವ 21 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕವಿತೆಗಳು ಪದಗಳಲ್ಲಿ ಅವಿತಿರುತ್ತವೆ. ಅವುಗಳನ್ನು ಪೋಣಿಸಿದರೆ ಅದೊಂದು ಕವಿತೆಯಾಗುತ್ತದೆ.ಕವಿಗೆ ಪ್ರತಿಭೆ ಅಂತರ್ಗತವಾಗಿರಬೇಕು. ಪರಿಶ್ರಮವಿರಬೇಕು. ಕವಿ ಕೌಶಲ್ಯವನ್ನು ಕಲಿಯಬಹುದು. ಅದರ ಜೊತೆ ಪ್ರತಿಭೆಯಿದ್ದರೆ ಮತ್ತಷ್ಟು ಒಳ್ಳೆಯ ರಚನೆಗಳು ಹೊರಬರುತ್ತದೆ.ಪ್ರಸ್ತುತ ಕಾಲಮಾನದಲ್ಲಿ ಕವಿತಾರಚನೆಯ ವೈವಿಧ್ಯಮಯ ವಸ್ತುಗಳು
ಕವಿತೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು.ಆಧುನಿಕ ಅವಿಷ್ಕಾರಗಳಲ್ಲಿ ಅತೀ ವೇಗವಾಗಿ ಜನರನ್ನು ತಲುಪುವ ವ್ಯವಸ್ಥೆಗಳಿವೆ.ನಾವೆಲ್ಲರೂ ಕವಿಗಳೆಂದು ಎನಿಸಿದ್ದರೆ ಅದಕ್ಕೆ ಕಾರಣ ವಿಮರ್ಶೆ. ಅದು ಕಟುವಾಗಿದ್ದರೂ ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಬೆಳೆಯಬೇಕು.
ಕವಿತೆಯೆಂಬುದು ವಿಸ್ಮಯ.ದಿನನಿತ್ಯದ ಅನುಭವಗಳೇ ಕವಿತೆಗಳನ್ನಾಗಿಸುವವನೇ ಕವಿ ಎಂದ ಅವರು ತಮ್ಮ ಅಂಕಲ್ ಮತ್ತು ಟ್ವಿಂಕಲ್ ಸ್ವರಚಿತ ಗೀತೆಯನ್ನು ವಾಚಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಡಾ.ಎ.ಎಸ್.ಶಂಕರ ನಾರಾಯಣ ಮಾತನಾಡಿ, ಕನ್ನಡ ಸಾಹಿತ್ಯ ರಚನೆ ಶೈಧಿಲ್ಯಾವಸ್ಥೆಯಲ್ಲಿದೆಯೆಂಬ ಭಾವನೆ ಸಾರ್ವತ್ರಿಕವಾಗಿರುವ ನಡುವೆ ಇಂದಿಗೂ ಮುದ್ರಣ ಮಾಧ್ಯಮದಲ್ಲಿ ಸಾಹಿತ್ಯಕ್ಕೆ ಪ್ರಾಶಸ್ತ್ಯವಿದೆ. ಸಾಮಾಜಿಕ ಮಾಧ್ಯಮ ತಾಣಗಳಲ್ಲಿ ಜನರನ್ನು ವೇಗವಾಗಿ ತಲುಪಲು ಸಾಧ್ಯವಿದೆಯಾದರೂ ಮುದ್ರಣ ಮಾಧ್ಯಮದಲ್ಲಿ ಪ್ರಕಟವಾದ ರಚನೆಗಳಿಗೆ ಸಿಗುವ ಪ್ರಾಮುಖ್ಯತೆಯೇ ಹೆಚ್ಚಿನದು. ಸಮಕಾಲೀನ ಕಾಲಘಟ್ಟದಲ್ಲಿ ಹೊಸ ತಕೆಮಾರಿನ ಕವಿಗಳು ಅಧ್ಯಯನಶೀಲರಾಗಿ ರಚನೆಯತ್ತ ಗಮನ ಹರಿಸಬೇಕು ಎಂದ ಅವರು ಶೃಂಗಾರ ಚೈತ್ರ ಸ್ವರಚನೆಯನ್ನು ವಾಚಿಸಿದರು.
ಸಾಹಿತಿ ಡಾ.ಸತ್ಯನಾರಾಯಣ, ಸಮ್ನೇಳನಾಧ್ಯಕ್ಷೆ ಎಂ.ಜಯಮ್ಮ, ಯರದಕೆರೆ ರಾಜಪ್ಪ, ಸೂರಿ ಶ್ರೀನಿವಾಸ್, ರೂಪಾನಾಯ್ಕ ಇದ್ದರು.
————
ಕವಿ ಗುರುರಾಜ ಹಾಲ್ಮಠ್
ಕವಯಿತ್ರಿ ಲತಾ ರಾಜು
ಗೋಷ್ಠಿಯಲ್ಲಿ ಭಾಗವಹಿಸಿದ ಕವಿಗಳು ವೈವಿಧ್ಯಮಯ ವಿಷಯಗಳನ್ನು ಕವಿತೆಗಳಿಗೆ ಆರಿಸಿಕೊಂಡಿದ್ದರು. ಕೊಲ್ಲಿ ಯುದ್ದದ ಬಗ್ಗೆ ಹಲವಾರು ಕವಿಗಳು ಆತಂಕವನ್ನು ಕವಿತೆಗಳ ಮೂಲಕ ವ್ಯಕ್ತಪಡಿಸಿದರು. ದೇವರಾಗದಿರು-ಪಟ್ಟ ಸುಲಭವಲ್ಲ ಕವಿತೆಯಲ್ಲಿ ಕವಯಿತ್ರಿ ಲತಾರಾಜು ದೇವರ ಕಷ್ಟಗಳನ್ನು ಸಮರ್ಥವಾಗಿ ತೆರೆದಿಟ್ಟರು. ಮಳೆ ಸುರಿದು ಇಳೆ ಹಸಿರಾಗಲಿ ಎಂದು ಕವಯಿತ್ರಿಯೊಬ್ಬರು ಹಾರೈಸಿದರು. ರಂಜಿತಾ ಶಿವನಿ
ಅತ್ತೆಯ ವಾತ್ಸಲ್ಯವನ್ನು ತಮ್ಮ ರಚನೆಯಲ್ಲಿ ಪ್ರಸ್ತುತ ಪಡಿಸಿದರೆ, ನಿರುದ್ಯೋಗ ಸಮಸ್ಯೆ
ಪವನ್ ಮರವಂಜಿ ಅವರ ರಚನೆಯಲ್ಲಿ ಅನಾವರಣಗೊಂಡಿತು.ಚಿಕ್ಕಮಗಳೂರು ಜಿಲ್ಲೆಯ ಐತಿಹಾಸಿಕ ಮಹತ್ವವನ್ನು ಇತಿಹಾಸ ತಜ್ಞ ಹಿರೇನಲ್ಲೂರು ಪಾಂಡುರಂಗ ಪ್ರಸ್ತುತಪಡಿಸಿದರು.ಗುರುರಾಜ ಹಾಲ್ಮಠ್ ಅವರ ಪ್ರಾಂಜಲಪ್ರಸ್ತಾನ ರಚನೆ ಗಮನ ಸೆಳೆಯಿತು.
ಸುಮಾರು 30 ಕ್ಕೂ ಹೆಚ್ಚು ಕವಿಗಳು ತಮ್ಮ ಸ್ವರಚಿತ ಕವಿತೆಗಳನ್ನು ವಾಚಿಸಿದರು.
