
ಕಡೂರು ತಾಲೂಕು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು
ಕಡೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಚಿಂತಾಮಣಿ ತಾಲೂಕಿನ ಕೋಡಿಗಲ್ ಗ್ರಾಮದ ರಮೇಶ್ ಮತ್ತು ಅವರ ಕುಟುಂಬದ ಮೇಲೆ ಹಲ್ಲೆ ಮಾಡಿರುವವರನ್ನು ಕೂಡಲೆ ಬಂಧಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಕಡೂರು ಕೃಷ್ಣಪ್ಪ ಒತ್ತಾಯಿಸಿದರು.
ಕಡೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ನಿವೃತ್ತ ಡಿವೈಎಸ್ಪಿ ಕೋನಪ್ಪ ರೆಡ್ಡಿ ಮುಂದಾಳತ್ವದಲ್ಲಿ ಸುಬ್ಬಾರೆಡ್ಡಿ, ಚಂದ್ರಪ್ಪ, ವೆಂಕಟರಮಣ ಗೋಪಾಲ, ರಂಗನಾಥ್ರೆಡ್ಡಿ, ಭಾಸ್ಕರ್ ರೆಡ್ಡಿ ಮುಂತಾದವರು ಕೋಡಿಗಲ್ ರಮೇಶ್ ವಿರುದ್ಧ ಸುಳ್ಳು ಮಾಹಿತಿ ನೀಡಿ ಕೇಸ್ ದಾಖಲಿಸಿದ್ದಾರೆ. ರಮೇಶ್ ಅವರ ಸಂಘಟನಾ ಶಕ್ತಿಯನ್ನು ಸಹಿಸಿಕೊಳ್ಳಲು ಸಾಧ್ಯವಾಗದೇ ಈ ರೀತಿ ಮಾಡಿದ್ದಾರೆ. ಪೊಲೀಸ್ ಇಲಾಖೆ ಕೂಡಲೇ ಇವರ ವಿರುದ್ಧ ಕ್ರಮ ಕೂಗೊಳ್ಳಬೇಕು ಎಂದರು.
ರಮೇಶ್ ಅವರಿಗೆ ನೀಡಿದ್ದ ಗನ್ ಮ್ಯಾನ್ ಸೌಲಭ್ಯವನ್ನು ಸರ್ಕಾರ ವಾಪಸ್ಸು ಪಡೆದ ನಂತರ 8 ಜನರ ಗುಂಪು ಅವರ ಮೇಲೆ ಹಲ್ಲೆ ಮಾಡಿದ್ದಲ್ಲದೆ ಕುಟುಂಬದವರನ್ನೂ ಅವಾಚ್ಯವಾಗಿ ನಿಂದಿಸಿದ್ದಾರೆ.ರಮೇಶ್ ಅವರು ಜಾತಿನಿಂದನೆ ಕೇಸ್ ದಾಖಲಿಸಿದ್ದಾರೆ. ಆದರೂ ಪೊಲೀಸರು 8 ಜನರನ್ನು ಈ ವರೆಗೂ ಬಂಧಿಸದೇ ಇರುವುದು ಖಂಡನೀಯ. ವಿಫಲವಾದ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ಮಹಿಳಾ ಘಟಕದ ರಾಜ್ಯ ಸಂಚಾಲಕಿ ಸುನಿತಾ ರಾಜ್ ಮಾತನಾಡಿ, ದಲಿತ ಹೋರಾಟಗಾರರ ಮೇಲಿನ ಹಲ್ಲೆ ಖಂಡನೀಯ. ಹೋರಾಟಗಾರರನ್ನು ಹತ್ತಿಕ್ಕುವ ಹುನ್ನಾರ ನಡೆಯುತ್ತಿದೆ. ದಲಿತ ಹೋರಾಟಗಾರರಿಗೆ ಸರ್ಕಾರ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಅಧ್ಯಕ್ಷ ರಂಗಸ್ವಾಮಿ, ಬಿ.ಎನ್.ಪ್ರತಾಪ್, ಲತಾ, ಧರ್ಮ, ವಾಸು, ಹೊನ್ನಪ್ಪ, ಪ್ರಭಾಕರ್, ಗಿರೀಶ್, ಮೈಲಾರಪ್ಪ ಇದ್ದರು.
